Friday, June 5, 2009

ಹಿರಿಯರ ಮೌಲ್ಯಗಳಿಂದ ಯುವಕರ ವ್ಯಕ್ತಿತ್ವ ಸುಧಾರಣೆ ಸಾಧ್ಯ



ಯುವಕರಿಂದಲೇ ದೇಶದ ಸುಧಾರಣೆ ಸಾಧ್ಯ ಎಂದು ಹಿರಿಯರು ಹೇಳುವಂತೆ, ದೇಶದ ಸುಧಾರಣೆಗೆ ಯುವಕರ ಪಾತ್ರ ಅವಶ್ಯಕವಾಗಿದೆ. ಆದರೆ ಇಂದಿನ ಕೆಲವೊಂದು ಘಟನೆಗಳನ್ನು ನೋಡಿದರೆ ದೇಶದ ಮಾರಕಕ್ಕೆ ಯುವಕರ ಕ್ರೂರ ಕೃತ್ಯಗಳು ಕಾರಣವಾಗುತ್ತಿವೆ. ಭಯೋತ್ಪಾದನೆ, ಕೊಲೆ- ಸುಲಿಗೆ, ಅಂದಾನುಕರಣೆ, ಹೀಗೆ ಹಲವಾರು ಕೃತ್ಯಗಳಲ್ಲಿ ಯುವಕರು ತೊಡಗುತ್ತಿರುವುದು ಇಂದಿನ ದಿನ ಸರ್ವೇ ಸಾಮಾನ್ಯವಾಗಿದೆ.


ಸಾರ್ವಜಿಕ ಸ್ಥಳಗಳಾದ ಹೊಟೇಲ್, ಬಸ್ ಸ್ಟ್ಯಾಂಡ, ಪಾರ್ಕ್, ಸಭೆ ಸಮಾರಂಭಗಳಲ್ಲಿ ಯುವಕರ ವರ್ತನೆ ತುಂಬ ವಿಚಿತ್ರವಾಗಿರುತ್ತದೆ. ಈ ವಿಚಿತ್ರ ವರ್ತನೆ ಉಳಿದವರ ಮನಸ್ಸಿಗೆ ನೋವಾಗುವಂತೆ ಮಾಡುತ್ತದೆ. ಇಂತಹ ವರ್ತನೆಗಳಿಗೆ ಹಲವಾರು ಕಾರಣಗಳಿವೆ. ಮುಖ್ಯ ಕಾರಣವೆಂದರೆ ಮಾರ್ಗದರ್ಶನದ ಕೊರತೆ ಮತ್ತು ಹಿರಿಯರ ಮೌಲ್ಯಗಳಿಂದ ವಂಚಿತರಾಗುಳಿಯುವುದು. ಮೊದಲು ಒಂದು ಮಗು ಜನಿಸಿದ ನಂತರ ಅದರ ಬೆಳವಣಿಗೆಗೆ ಬೇಕಾದ ಒಳ್ಳೆಯ ವಾತಾವರಣವನ್ನು ತಂದೆ ತಾಯಿ ಮತ್ತು ಆ ಕುಟುಂಬದ ಸದಸ್ಯರು ಕೊಡುತ್ತಿದ್ದರು. ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ತಂದೆ ತಾಯಿ ಮತ್ತು ಕುಟುಂಬದ ಪಾತ್ರ ಮುಖ್ಯವಾದುದು.


ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗುವುದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಬೆಳೆಸುವುದು ಒಳ್ಳೆಯದು. ಹಿಂದೆ ತಂದೆ ತಾಯಿಯಾದವರು ಮಗುವಿಗೆ ಶಿವಶರಣರ, ಮಹಾಪುರುಷರ ಕಥೆಗಳನ್ನು ಹೇಳುತ್ತ, ಒಳ್ಳೆಯ ಮೌಲ್ಯಗಳನ್ನು ಹೇಳುತ್ತ ಆ ಮಗುವಿನ ನಡೆ, ನುಡಿ, ಒಳ್ಳೆಯ ಸಂಸ್ಕೃತಿ ಬೆಳೆಸಲು ಕಷ್ಟ ಪಡುತ್ತಿದ್ದಳು. ಆದರೆ ಇಂದಿನ ದಿನಗಳಲ್ಲಿ ಆಧಿನಿಕತೆಯ ಯಂತ್ರಕ್ಕೆ ಸಿಕ್ಕು ಮಗುವಿನ ಬೆಳವಣಿಗೆ ಮತ್ತು ಭವಿಷ್ಯದ ಬಗ್ಗೆ ಚಿಂತಿಸುವಷ್ಟು ಪುರುಸೊತ್ತು ಇಂದಿನ ತಂದೆ- ತಾಯಂದಿರ ಹತ್ತಿರವಿಲ್ಲ. ಎಲ್ಲರು ಕೆಲಸದ ಒತ್ತಡದಲ್ಲಿರುವುದರಿಂದ ಮಕ್ಕಳನ್ನು ಯಾವುದೋ ಆಯಾ ಹತ್ತಿರ ಬಿಟ್ಟು ಹೋಗುತ್ತಾರೆ. ಇದರಿಂದ ಮಗು ತಂದೆ- ತಾಯಿಯ ಪ್ರೀತಿಯಿಂದ ಮತ್ತು ಮಾರ್ಗದರ್ಶನದಿಂದ ವಂಚಿತವಾಗುತ್ತದೆ.


ಈ ರೀತಿ ಒಳ್ಳೆಯ ಮಾರ್ಗದರ್ಶನ ಸಿಗದೇ ಹೋದ ಮತ್ತು ನಿರ್ಲಕ್ಷಕ್ಕೆ ಒಳಗಾದ ಮಕ್ಕಳು ಮುಂದೆ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇಂದಿನ ದಿನ ನಾವು ನೋಡುವಂತೆ ಕೆಲವೊಂದು ಯುವಕರು ಮಧ್ಯಸೇವನೆ ಮಾಡಿ ಸಭ್ಯ ಜನರನ್ನು ಹೀಯಾಳಿಸುವುದು ಮತ್ತು ಮಹಿಳೆಯರನ್ನು ಚುಡಾಯಿಸುವುದು ಮತ್ತು ಕಾನೂನಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಬೈಕ್ ಓಡಿಸುವುದು ಹೀಗೆ ಅಸಭ್ಯವಾಗಿ ನಡೆದುಕೊಳ್ಳುವುದು ಸಾಮಾನ್ಯವಾಗಿದೆ. ಆದ ಕಾರಣ ಹಿರಿಯರು ತಂದೆ ತಾಯಿಗಳು ಮಕ್ಕಳ ಬೆಳವಣಿಗೆಯಲ್ಲಿ ನಿಗಾ ವಹಿಸಬೇಕು.

No comments:

Post a Comment