Sunday, November 8, 2009

ಮೊಬೈಲ್ ಅಲೆಯಲ್ಲಿ ಎಸ್.ಟಿ.ಡಿ ಬೂತ್ ಗಳ ರೋಧನೆ

"ಯಾರೇ ಕೂಗಾಡಲಿ ಯಾರೇ ಚೀರಾಡಲಿ ಎಸ್.ಟಿ.ಡಿ ಬೂತ್ ನನಗೆ ಸಾಟಿಯಿಲ್ಲ" ಎಂದು ಮೊಬೈಲ್ ಗಳು ಬೀಗುತ್ತಿದ್ದರೆ, ಈ ಮೊಬೈಲ್ ಬಳಕೆಯಿಂದ ನಾವು ಅನಾತರಾಗುತ್ತಿದ್ದೇವೆ, ನಮ್ಮನ್ನು ಯಾರು ಮಾತನಾಡಿಸುವವರೇ ಇಲ್ಲ ಎಂದು ಎಸ್.ಟಿ.ಡಿ ಬೂತ್ ಗಳು ಗೋಳಿಡುತ್ತಿವೆ.

ನಿಜ ಇಂದಿನ ದಿನ ಮೊಬೈಲ್ ಗಳ ಅತಿಯಾದ ಬಳಕೆಯಿಂದ ಎಸ್.ಟಿ.ಡಿ ಬೂತ್ ಗಳು ಅನಾತವಾಗುತ್ತಿವೆ. ಪ್ರತಿಯೊಬ್ಬರು ಮೊಬೈಲ್ ಪ್ರೀಯರಾಗಿದ್ದಾರೆ. ಹಿಂದೆಲ್ಲ ಎಸ್.ಟಿ.ಡಿ ಬೂತ್ ಗಳೆಂದರೆ ಎಲ್ಲರಿಗೂ ಬಹಳ ಗೌರವ ಮತ್ತು ಪ್ರೀತಿ, ಏಕೆಂದರೆ ಮೊಬೈಲಗಳು ಬೆಳಕಿಗೆ ಬರುವುದಕ್ಕಿಂತ ಮುಂಚೆ ದೂರ ಸಂಪರ್ಕಕ್ಕೆ ಈ ಎಸ್.ಟಿ.ಡಿ ಬೂತ್ ಗಳೇ ಆಧಾರವಾಗಿದ್ದವು.

ದೂರದಲ್ಲಿದ್ದ ತಂದೆ- ತಾಯಿಯ ಜೊತೆ, ಅಕ್ಕ- ಅಣ್ಣನ್ ಜೊತೆ, ಪ್ರಿಯತಮ- ಪ್ರಿಯತಮೆಯ ಜೊತೆ ಸಂವಹನ ಮಾಡಲು ಈ ಎಸ್.ಟಿ.ಡಿ ದೂರ ಸಂಪರ್ಕ ಮಾದ್ಯಮವೇ ಸಹಕಾರಿಯಾಗಿತ್ತು. ಒಂದು ಕರೆಗೆ ೨ರಿಂದ ೩ ರೂ ದರವಿದ್ದರೂ ಲೆಕ್ಕಿಸದೇ ಜನ ಮಾತನಾಡುತ್ತಿದ್ದ ಕಾಲವದು. ಬೂತ್ ಗಳ ಹೊರಗೆ ಸಾಲು ಸಾಲು ಜನ ಕರೆ ಮಾಡಲು ಕಾಯುತ್ತಿದ್ದರು.

ಆದರೆ ಇಂದು ಆ ಎಸ್.ಟಿ.ಡಿ ಬೂತ್ ಗಳತ್ತ ತಲೆ ಹಾಕಿ ನೋಡುವವರೇ ಇಲ್ಲದಂತಾಗಿದೆ. ಇಂದಿನ ದಿನ ಅಗ್ಗ ದರದಲ್ಲಿ ಲಭ್ಯವಿರುವ ಮೊಬೈಲ್ ಗಳು, ಕಡಿಮೆ ದರದ ಕರೆಗಳು, ಉಚಿತ ಸಿಮ್ ಕಾರ್ಡಗಳು ಹೀಗೆ ಒಂದರ ಮೇಲೊಂದರಂತೆ ಸೌಲಭ್ಯಗಳು ಜನರಿಗೆ ಲಭ್ಯವಿರುವಾಗ ಎಸ್.ಟಿ.ಡಿ ಬೂತ್ ಗಳತ್ತ ಯಾರು ಹೋಗ್ತಾರೆ ಅಲ್ಲವೇ!

ಹಾಗಂತ ಎಸ್.ಟಿ.ಡಿ ಬೂತ್ ಗಳು ಮೊದಲಿನಂತೆ ದುಬಾರಿ ಇಲ್ಲ ಅವುಗಳಲ್ಲೂ ಹಲವಾರು ಬದಲಾವಣೆಗಳಾಗಿವೆ. ಕರೆಗಳ ದರದಲ್ಲಿ ಇಳಿಕೆಯಾಗಿದೆ. ಒಂದು ಕರೆಗೆ ೩ ರೂ ತನಕ ಇದ್ದ, ದರವನ್ನು ೧ರಿಂದ ೫೦ ಪೈಸೆಯ ತನಕ ಕಡಿಮೆ ಮಾಡಿ ಮೊಬೈಲ್ ಪ್ರತಿ ಸ್ಪರ್ಧಿಯಾಗಿ ನಿಂತಿದೆ.

ಆದರೆ ಇಂದಿನ ವೇಗಗತಿಯಲ್ಲಿ ಬೆಳೆಯುತ್ತಿರುವ ಕಾಲದಲ್ಲಿ ಜನರಿಗೆ ಎಸ್.ಟಿ.ಡಿ ಬೂತ್ ಗಳಲ್ಲಿ ನಿಂತು ಮಾತನಾಡುವಷ್ಟು ಸಮಯ ಇಲ್ಲದಂತಾಗಿದೆ. ಕೆಲಸದ ಜೊತೆಗೇ ದೂರವಾಣಿಯಲ್ಲಿ ಮಾತನಾಡಬೇಕೆಂಬುದು ಜನರ ಬೇಡಿಕೆ ಮತ್ತು ಆಶಯ. ಅದಕ್ಕೆ ತಕ್ಕಂತೆ ಮೊಬೈಲ್ ಗಳು ಇಂದು ಜನರಿಗೆ ಲಭ್ಯ ಇವೆ, ಯಾವುದೇ ಕೆಲಸ ಮಾಡುವಾಗಲೂ ಮೊಬೈಲ್ ನಲ್ಲಿ ಮಾತನಾಡಬಹುದಾಗಿದೆ. ಒಟ್ಟಿನಲ್ಲಿ ದೂರ ಸಂಪರ್ಕ ಸಾಧನಗಳ ಸ್ಪರ್ಧೆಯಲ್ಲಿ ಮೊಬೈಲ್ ಗಿಂತ ಎಸ್.ಟಿ.ಡಿ ಬೂತ್ ಹಿನ್ನಡೆ ಸಾಧಿಸಿದ್ದಂತು ನಿಜ.

ಎಷ್ಟೇ ಸೌಲಭ್ಯಗಳಿದ್ದರೂ ಎಸ್.ಟಿ.ಡಿ ಬೂತ್ ಗಳಷ್ಟು ನೆಮ್ಮದಿ ಮೊಬೈಲ್ ಗಳಲಿಲ್ಲ. ಏಕೆಂದರೆ ಬೂತ್ ಗಳಲ್ಲಿ ಮಾತನಾಡುತ್ತಿರುವಾಗ ಇನ್ನೊಬ್ಬರಿಗೆ ತೊಂದರೆಯಾಗಲೀ, ಕಿರುಕುಳವಾಗಲೀ ಇರುತ್ತಿರಲಿಲ್ಲ. ಆದರೆ ಇಂದು ಈ ಮೊಬೈಲ್ ಗಳದ್ದು ದೊಡ್ಡ ಕಿರಿಕಿರಿ. ಪಕ್ಕದಲ್ಲಿರುವವರಿಗೆ ತೊಂದರೆಯಾಗುತ್ತದೆ ಎಂದು ಲೆಕ್ಕಿಸದೇ ಮೊಬೈಲ್ ನಲ್ಲಿ ವಿಚಿತ್ರವಾಗಿ ಮಾತನಾಡುತ್ತಿರುವವರನ್ನು ಕಾಣಬಹುದು.

ದೇವಸ್ಥಾನದಲ್ಲಿದ್ದಾಗ, ಬಸ್ ನಿಲ್ಧಾಣದಲ್ಲಿದ್ದಾಗ, ವಾಹನಗಳನ್ನು ಓಡಿಸುತ್ತಿರುವಾಗ ತಾವು ಎಲ್ಲಿ ಇರುವರು ಎಂಬುದನ್ನು ಕೂಡ ಲೆಕ್ಕಿಸದೆ ಮೊಬೈಲ್ ಗಳಲ್ಲಿ ಮಾತನಾಡುವ ಜನರ ವರ್ತನೆ ಬಹಳ ವಿಚಿತ್ರ!

ಅತಿಯಾದ ಮೊಬೈಲ್ ಬಳಕೆಯಿಂದ ಹಲವಾರು ಅಪಘಾತಗಳಾಗುತ್ತಿರುವುದು ಇಂದಿನ ದಿನ ಹೆಚ್ಚಾಗಿದೆ. ಇತ್ತೀಚೆಗೆ ಮೊಬೈಲ್ ನಲ್ಲಿ ಮಾತನಾಡುತ್ತ ರೈಲ್ವೆಗೆ ಸಿಕ್ಕು ಸಾವನ್ನಪ್ಪಿದ ಮಹಿಳೆಯ ವರದಿಯನ್ನು ದಿನ ಪತ್ರಿಕೆಯಲ್ಲಿ ನೋಡಿದಾಗ ಮೊಬೈಲ್ ಗಳ ದುಷ್ಪರಿಣಾಮ ಎಷ್ಟು ಎಂಬುದು ತಿಳಿಯುತ್ತದೆ.

ಒಟ್ಟಿನಲ್ಲಿ ಮೊಬೈಲನ್ನು ಅವಶ್ಯಕತೆಗೆ ತಕ್ಕಂತೆ, ಇನ್ನೊಬ್ಬರಿಗೆ ತೊಂದರೆಯಾಗದಂತೆ ಬಳಸುವುದು ಒಳ್ಳೆಯದು.

Wednesday, October 28, 2009

ಕುಲಾಂತರಿಯ ಅವಾಂತರಗಳು


ಬಿ.ಟಿ ಹತ್ತಿಯಿಂದ ಆದ ದುಷ್ಪರಿಣಾಮಗಳನ್ನು ತಿಳಿದರೂ ಈಗ ಬದನೆಯನ್ನು ಕುಲಾಂತರಿಸಿದ್ದು ಒಂದು ಅವಿವೇಕದ ಕೆಲಸ ಎಂದರೆ ತಪ್ಪಾಗಲಾರದು.

ಕೃಷಿ ವಿಶ್ವವಿದ್ಯಾಲಯಗಳು ಈಗಾಗಲೇ ಪಿರಂಗಿ, ಮರಗೆಣಸು, ಆಲೂಗಡ್ಡೆ, ಟೊಮ್ಯಾಟೋ, ಬೆಂಡೇಕಾಯಿ ಮತ್ತು ಮೆಕ್ಕೇಜೋಳದಂತ ಬೆಳೆಗಳನ್ನು ಕುಲಾಂತರಿಸಿದೆ. ಹಲವಾರು ವಿಜ್ಣಾನಿಗಳು ಈ ಕುಲಾಂತರಿ ನೀತಿಯನ್ನು ವಿರೋಧಿಸಿದ್ದಾರೆ.
ಕುಲಾಂತರಿ ಬದನೆಯಿಂದ ಹೆಚ್ಚಿನ ಫಸಲು ಬರುತ್ತದೆಯಾದರೂ, ಅದರಿಂದಾಗುವ ದುಷ್ಪರಿಣಾಮಗಳೇ ಹೆಚ್ಚು. ಹಾಗೇ ಮೂಲ ದೇಶಿ ಬದನೆ ತಳಿಗಳು ಕಣ್ಮರೆಯಾಗುವಂತ ಗಂಭೀರ ಪರಿಸ್ಥಿತಿ ತಲೆದೋರಬಹುದು.

ಕುಲಾಂತರಿ ಬೆಳೆಗಳೆಂದರೇನು?
ವೈರಸ್, ಬ್ಯಾಕ್ಟೀರಿಯಾ, ಚೇಳು, ಜೇಡ ಮತ್ತಿತರ ಜೀವಿಗಳಿಂದ ವಂಶವಾಹಿಗಾನ್ನು ಹೊರತೆಗೆದು ಬದನೆ, ಬೆಂಡೇಕಾಯಿ, ಆಲೂಗಡ್ಡೆ, ಟೊಮ್ಯಾಟೋ ಮತ್ತು ಮೆಕ್ಕೆಜೋಳದಂಥ ಆಹಾರ ಧಾನ್ಯಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸಲಾಗುತ್ತದೆ. ಇದೇ ಕುಲಾಂತರಿ ಆಹಾರ ಧಾನ್ಯ.

Sunday, October 25, 2009

ಪತ್ರಕರ್ತರು ಯಾವಾಗಲು ಭಿನ್ನವಾಗಿ ಯೋಚಿಸಬೇಕು; ವಿಶ್ವೇಶ್ವರ ಭಟ್

ಪತ್ರಿಕೋದ್ಯಮಕ್ಕೆ ತನ್ನದೇ ಆದ ಸ್ಥಾನಮಾನಗಳಿವೆ, ಅದಕ್ಕೆ ತಕ್ಕ ಅರ್ಹತೆಗಳನ್ನು ಬೆಳೆಸಿಕೊಳ್ಳದೆ ಪತ್ರಿಕೋದ್ಯಮದಲ್ಲಿ ಬಾಳಲು ಸಾಧ್ಯವಿಲ್ಲ ಎಂದು ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಹೇಳಿದರು.


ಮೈಸೂರಿನ ಮಹಾಜನ ಪ್ರಥಮ ದರ್ಜೆ ಪತ್ರಿಕೋದ್ಯಮ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ ೯ ಮತ್ತು ೧೦, ೨೦೦೯ ರಂದು ನಡೆದ ರಾಜ್ಯ ಮಟ್ಟದ ಎರೆಡು ದಿನಗಳ ಕಾರ್ಯಾಗಾರದಲ್ಲಿ "ಪ್ರಸ್ತುತ ಪತ್ರಿಕೋದ್ಯಮ; ಪತ್ರಕರ್ತರ ಮುಂದಿರುವ ಸೃಜನಶೀಲ ಸವಾಲುಗಳು" ಎಂಬ ವಿಷಯದ ಮೇಲೆ ಅವರು ಮಾತನಾಡುತ್ತಿದ್ದರು.


ಪತ್ರಕರ್ತರು ಯಾವಾಗಲು ಭಿನ್ನವಾಗಿ ಯೋಚಿಸಬೇಕು ಇಲ್ಲದಿದ್ದರೆ ನಮಗು ಉಳಿದವರಿಗು ಏನು ವ್ಯತ್ಯಾಸ ಎಂದ ಅವರು ಇಂದಿನ ದಿನ ತಾಂತ್ರಿಕವಾಗಿ ಬಲಿಷ್ಟವಾಗಿರದಿದ್ದರೆ ನಮ್ಮ ಸ್ಠಾನವನ್ನು ಇನ್ನೊಬ್ಬ ಸಮರ್ಥ ಗಿಟ್ಟಿಸಿಕೊಳ್ಳುತ್ತಾನೆ. ಆದ್ದರಿಂದ ಪತ್ರಕರ್ತರಾಗುವವರು ಮೊದಲೆ ಎಲ್ಲ ವಿಷಯದ ಬಗ್ಗೆ ತಿಳಿದಿರಬೇಕು ಎಂದು ಸಲಹೆ ನೀಡಿದರು.



೧೯೧೩ ರಲ್ಲಿ ಪಾರಿವಾಳದ ಮೂಲಕ ಸುದ್ಧಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ ಇಂದಿನ ದಿನ ಕ್ಷಣ ಮಾತ್ರದಲ್ಲಿ ಸುದ್ಧಿ ವಿನಿಮಯ ಮಾಡಬಹುದಾದಂತ ತಂತ್ರಜ್ಣಾನಗಳು ಬಂದಿವೆ. ಆದ್ದರಿಂದ ಪತ್ರಕರ್ತರಾಗುವವರು ಅಂತರ್ಜಾಲದ ಬಗ್ಗೆ ಅಪಾರ ಜ್ಣಾನವನ್ನು ಉಳ್ಳವರಾಗಿರಬೇಕು ಎಂದರು.



ಹಲವಾರು ಪತ್ರಿಕೆಗಳು ಹಿಂದಿನಂತೆಯೆ ಇವೆ. ಪುಟಗಳಲ್ಲಾಗಲಿ ಬರಹದ ಶೈಲಿಯಲ್ಲಾಗಲಿ ಬದಲಾವಣೆ ಎಂಬುದಿಲ್ಲ. ಆದ್ದರಿಂದ ಪತ್ರಿಕೆಗಳು ಬದಲಾಗಬೇಕಿದೆ. ಜನಮನಕ್ಕೆ ಹತ್ತಿರವಾದ ಸುದ್ದಿಗಳು ಮುಖಪುಟದಲ್ಲಿ ಬರಬೇಕು ಮತ್ತು ಪತ್ರಕರ್ತರು ಸೃಜನಶೀಲತೆಯಿಂದ ಯೋಚಿಸಬೇಕು ಎಂದರು.

Friday, June 19, 2009

ಸಂಜೀವಿನಿಯಂತೆ ಶಿವಪ್ಪಣ್ಣನ ಸಿಹಿ ನೀರಿನ ಬಾವಿ



ಊರಲ್ಲಿರುವ ಕೆರೆಗಳೆಲ್ಲ ಬತ್ತಿ ಹೋದರು ಚಿಂತೆಯಿಲ್ಲ, ಗುದಗಿ ಶಿವಪ್ಪನ್ನನ ತೋಟದಲ್ಲಿರುವ ಸಿಹಿ ನೀರು ಬಾವಿ ಇದೆಯಲ್ರಿ. ಇಡೀ ಊರಿನ ಜನರೆಲ್ಲರೂ ಶಿವಪ್ಪನ್ನನ ಬಾವಿಯಲ್ಲಿ ಕುಡಿಯಲು ನಿರೋಯುತ್ತಿದ್ದರು ಶಿವಪ್ಪನ್ನ ಬೇಡೆನ್ನದ ಮುಗ್ದ ಮತ್ತು ಉಧಾರ ಮನಸ್ಸಿನವನು. ಅಂದಹಾಗೆ ಯಾರದು ಶಿವಪ್ಪನ್ನ! ಅಂತೀರಾ.





ಧಾರವಾಡ ಜಿಲ್ಲೆ ನವಲಗುಂದ ತಾಲೂಕಿ ಶಲವಡಿ ಗ್ರಾಮದ ಪ್ರಗತಿಪರ ರೈತ ಈ ಶಿವಪ್ಪನ್ನ. ಶಲವಡಿ ಎಂದ ಕೂಡಲೇ ಹಿಂದೆಲ್ಲ ನೀರಿನ ಸಮಸ್ಯೆಯೇ ಎದ್ದು ಕಾಣುತ್ತಿತ್ತು, ಶಲವಡಿಯಷ್ಟೇ ಅಲ್ಲ ನವಲಗುಂದ ತಾಲೂಕಿನ ಹಲವಾರು ಗ್ರಾಮಗಳು ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದವು. ಈಗಲೂ ಕೆಲವೊಂದು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದು ಕಾಣಬಹುದು.





ಹಿಂದೆ ಮಳೆ ಹೋಯಿತೆಂದರೆ ಕುಡಿಯುವ ನೀರಿಗೆ ಪರದಾಟ ಶುರು. ಇದಕ್ಕೆ ಶಲವಡಿ ಗ್ರಾಮ ಒಂದು ಉದಾಹರಣೆ. ಶಲವಡಿಯಲ್ಲಿ ಹಲವಾರು ಬಾವಿ , ಕೆರೆಗಳಿವೆ, ಅವು ಮಳೆಯಾಧಾರಿತ ನೀರಿನ ಮೂಲಗಳಾಗಿದ್ದವು. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲೂಶಲವಡಿಯ ಜನರಿಗೆ ಸಂಜೀವಿನಿಯಂತೆ ನೆರವಾಗಿದ್ದು ಗುದಗಿ ಶಿವಪ್ಪನ್ನನ ಸಿಹಿ ನೀರಿನ ಬಾವಿ .





ಗುದಗಿಯವರ ತೋಟ ಎಂದರೆ, ಏನೋ ಮನಸ್ಸಿಗೆ ತಂಪಾಗುತ್ತದೆ ಏಕೆಂದರೆ ಆ ತೋಟ ಅಷ್ಟು ಹಸಿರು ಮತ್ತು ಶಿವಪ್ಪನ್ನನ ವಿಶಾಲ ಹೃದಯ . ಹಳ್ಳದ ದಂಡೆಯ ಮೇಲೆ ಶಿವಪ್ಪನ್ನನ ತೋಟ ಅದರಲ್ಲಿ ತನ್ನ ತಂದೆಯ ಕಾಲದಲ್ಲಿ ನಿರ್ಮಾಣವಾದ ಬಾವಿ . ಊರಿನ ಜನರೆಲ್ಲರೂ ಬರಗಾಲದಲ್ಲಿ ಈ ಬಾವಿ ಯಿಂದಲೇ ಯತ್ತಿನ ಬಂಡಿ, ಒತ್ತುವ ಬಂಡಿಗಳ ಮೂಲಕ ನೀರನ್ನು ಒಯ್ಯುತ್ತಿದ್ದರು. ಶಿವಪ್ಪನ್ನ ಆ ಭಾವಿಯಲ್ಲಿ ಒಂದು ಬೋರ್ವೆಲ್ ಹಾಕಿಸಿದ್ದಾನೆ, ತನ್ನ ಡಿಸೇಲ್ ಹೋದರು ಪರವಾಗಿಲ್ಲ ಅಂತ ನೀರಿಗೆ ಬಂದವರಿಗೆ ಆ ಬೋರ್ವೆಲ್ ಮುಖಾಂತರ ನೀರು ಕೊಡುತ್ತಿದ್ದ. ದೊಡ್ಡ ಟ್ಯಾಂಕರ್ ಗಳಿಗೆ ಮಾತ್ರ ಹಣ ಪಡೆಯುತ್ತಿದ್ದ ಅದು ಆತ್ಮೀಯತೆಯಿಂದ.

Thursday, June 18, 2009

ಆಕಳು ಮೂತ್ರ ಬೆಳೆಗಳಿಗೆ ಮೂಲಮಂತ್ರ

ಭಾರತೀಯ ರೈತರಿಗೆ ಮತ್ತು ಜಾನುವಾರುಗಳಿಗೆ ಬಿಡದ ನಂಟು. ಭೂಮಿಯನ್ನು ಬಿತ್ತುವುದರಿಂದ ಹಿಡಿದು ಫಸಲು ಪಡೆಯುವತನಕ ರೈತ ಜಾನುವಾರುಗಳನ್ನೇ ಅವಲಂಬಿಸಿರುತ್ತಾನೆ. ಅದರಲ್ಲೂ ಆಕಳು ರೈತನಿಗೆ ದೇವರ ಸಮಾನವಿದ್ದಂತೆ. ಆಕಳು ಮೂತ್ರವನ್ನು ಬೆಳೆಗಳಿಗೆ ಗೊಬ್ಬರವನ್ನಾಗಿ ಉಪಯೋಗಿಸುತ್ತಾರೆ. ಆಕಳು ಮೂತ್ರ (ಶಗಣಿ) ಬೆಳೆಗಳಿಗೆ ಮೂಲ ಮಂತ್ರವಿದ್ದಂತೆ.


ಯಾವ ರಾಸಾಯನಿಕ ಗೊಬ್ಬರಗಳು ಮಾಡದಂತ ಕೆಲಸವನ್ನು ಆಕಳು ಮೂತ್ರ ಮಾಡುತ್ತದೆ. ಬೆಳೆಗಳಿಗೆ ನೀರು ಕೊಡುವ ಸಮಯದಲ್ಲಿ ನೀರಿನ ಜೊತೆ ಆಕಳು ಶಗಣಿಯನ್ನು ಮಿಶ್ರಣ ಮಾಡಲಾಗುತ್ತದೆ. ಇದು ಪ್ರತಿ ಬೆಳೆಯನ್ನು ತಲುಪುತ್ತದೆ. ಬೆಳೆ ಪುಷ್ಟಿದಾಯಕವಾಗಲು ಈ ಪದ್ಧತಿ ಸಹಕಾರಿಯಾಗುತ್ತದೆ.

ವಿಧಾನ -

ಹೊಲಕ್ಕೆ ನೀರು ಬರುವ ಮೂಲ ಅಂದರೆ, ಕಾಲುವೆ ಅಥವಾ ಕೊಳವೆ ಹೀಗೆ ನೀರು ಬರುವ ಜಾಗದಲ್ಲಿ ಒಂದು ಸಣ್ಣ ಗುಂಡಿಯನ್ನು ತೋಡಿ . ಆ ಗುಂಡಿಯಲ್ಲಿ ಆಕಳು ಮೂತ್ರವನ್ನು ಶೇಕರಿಸಬೇಕು , ನಂತರ ಕೊಳವೆಯ ಮುಖಾಂತರ ನೀರು ಬಂದಾಗ ಕಟ್ಟಿಗೆಯ ಸಹಾಯದಿಂದಲೋ ಅಥವಾ ಕೈ ಮುಖಾಂತರ ಆ ಆಕಳು ಮೂತ್ರವನ್ನು ಕಲಿಸಬೇಕು. ಹಾಗೆ ಮಾಡುವಾಗ ನೀರಿನಲ್ಲಿ ಮೂತ್ರ ಮಿಶ್ರಣವಾಗಿ ಪ್ರತಿ ಬೆಳೆಯ ಬೇರುಗಳಿಗೆ ನೇರವಾಗಿ ತಲುಪುತ್ತದೆ. ಇದರಿಂದ ಫಸಲು ಚೆನ್ನಾಗಿ ಬರುತ್ತದೆ. ಮತ್ತು ಭೂಮಿಯು ಫಲವತ್ತತೆಯನ್ನು ಕಾಯ್ದುಕೊಳ್ಳುತ್ತದೆ.






Saturday, June 13, 2009

ಭವ್ಯ ಪರಂಪರೆಯ ಹಂಪಿ

ಕನ್ನಡ ನಾಡಿನ ಶಿಲ್ಪಕಲೆ , ಸಂಸ್ಕೃತಿ, ಸಾಹಿತ್ಯ, ಪ್ರತಿ ಬಿಂಬ ಇಂದಿನ ಹಂಪಿ. ಬಳ್ಳಾರಿ ಜಿಲ್ಲೆಯ, ಹೊಸಪೇಟಿಯ ಹತ್ತಿರವಿರುವ ಈ ಹಂಪಿ ವಿಜಯ ನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಭವ್ಯ ಸಂಸ್ಕೃತಿಯ ನೆಲೆವೀಡು ಹಂಪಿ. ಇಂದಿಗೂ ತನ್ನ ಗತವೈಭವವನ್ನು ಸ್ಮಾರಕಗಳು ಮತ್ತು ದೇವಾಲಯಗಳಿಂದ ಎತ್ತಿ ಸಾರುತ್ತದೆ.



ಹಂಪಿಯನ್ನು ಹಲವಾರು ಪ್ರಸಿದ್ಧ ರಾಜ ಮನೆತನಗಳು ಅಳಿಹೊಗಿದ್ದಾರೆ ಅವರು ಕನ್ನಡ ನಾಡು ನುಡಿಗೆ ಕೊಟ್ಟ ಕೊಡುಗೆ ಅಪಾರ. ಅವರಲ್ಲಿ ವಿಜಯ ನಗರ ಸಾಮ್ರಾಜ್ಯವು ಒಂದು, ಅದರಲ್ಲೂ ಶ್ರೀ ಕೃಷ್ಣದೇವರಾಯನ ಕಾಲವನ್ನು ಸುವರ್ಣ ಯುಗ ಎಂದು ಹೇಳಲಾಗಿದೆ. ಮೊದಲು ಹಂಪಿಯನ್ನು ಪಂಪ, ವಿರುಪಾಕ್ಷಪುರ ಮತ್ತು ವಿಜಯ ನಗರ ಎಂತಲೂ ಕರೆಯುತ್ತಿದ್ದರೆಂದು ಇತಿಹಾಸದ ಮೂಲಕ ತಿಳಿಯಲಾಗಿದೆ. ಹಂಪಿ ತನ್ನದೇ ಆದ ವಿಶಿಷ್ಟವಾದ ವಾಸ್ತುಶಿಲ್ಪವನ್ನು ಹೊಂದಿದೆ.



ವಿರುಪಾಕ್ಷ ದೇವಾಲಯ, ಉಗ್ರ ನರಸಿಂಹ, ವಿಠ್ಠಲ ದೇವಾಲಯ, ಲೋಟಸ್ ಮಹಲ್, ನಕ್ಷತ್ರ ಬಾವಿ , ಅನೆ ಲಾಯಗಳು, ಸಾಸಿವೆ ಗಣಪತಿ ಹೀಗೆ ಹಲವಾರು ಬಗೆಯ ಶಿಲ್ಪದಿಂದ ಸ್ಥಾಪಿಸಲಾದ ಸ್ಮಾರಕಗಳು ಮತ್ತು ದೇವಾಲಯಗಳು ಹಂಪಿಯಲ್ಲಿ ಕಾಣ ಸಿಗುತ್ತವೆ.

Friday, June 12, 2009

ಸಮಾಜ ಸುಧಾರಕ ಬಸವಣ್ಣ


೧೨ ನೇ ಶತಮಾನದ ಕ್ರಾಂತಿ ಯೋಗಿ, ಸಮಾಜ ಸುಧಾರಕ ಮತ್ತು ವೀರಶೈವ ಧರ್ಮದ ಸುಧಾರಕನಾದ ಬಸವಣ್ಣನವರು ನಮ್ಮ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ. ಅಷ್ಟೇ ಅಲ್ಲದೆ ಇವರ ಕಾಲದಲ್ಲಿ ವಚನ ಸಾಹಿತ್ಯವೂ ಹರಿದು ಬಂತು.
ಬಸವಣ್ಣನವರು ೧೨ ನೇ ಶತಮಾನದಲ್ಲಿ ಇದ್ದಂತ ಹಲವಾರು ಅನಿಷ್ಟ ಪದ್ಧತಿಗಳಾದ ಜಾತಿ, ಮೇಲು- ಕೀಳು, ಬಡ- ಬಲ್ಲಿದ ಹೀಗೆ ಇಂತಹ ಪದ್ಧತಿಗಳ ವಿರುದ್ದ ಹೋರಾಡಿ ಸಮಾಜದ ಸುಧಾರಣೆಗೆ ಶ್ರಮಿಸಿದರು. ಅಷ್ಟೇ ಅಲ್ಲದೇ ಮಹಿಳೆಯರಿಗೂ ಸಮಾನ ಸ್ಥಾನ ಮಾನ ಸಿಗಲೆಂದು ಪ್ರತಿಪಾದಿಸಿದರು.

Thursday, June 11, 2009

ಚಿಗುರೋ ಮನದಲಿ ಸಾಹಸ ಕಲೆಗಳು

ನಮ್ಮ ಇತಿಹಾಸವನ್ನು ನೋಡಿದಾಗ ನಮಗೆ ಹಲವಾರು ಸಾಹಸ ಕಲೆಗಳು ಇರುವುದು ಕಂಡು ಬರುತ್ತದೆ. ಅವುಗಳಲ್ಲಿ ಹಗ್ಗ ಮಲ್ಲಗಂಬವು ಒಂದು . ಈ ಮಲ್ಲಗಂಬ ಕಲೆಯು ಬಹಳ ಇತಿಹಾಸವನ್ನು ಹೊಂದಿದೆ . ಇತ್ತೀಚೆಗೆ ಶಲವಡಿಯಲ್ಲಿ ಪ್ರಾರಂಭವಾದ ಬೇಸಿಗೆ ಶಿಬಿರದಲ್ಲಿ ಈ ಹಗ್ಗಮಲ್ಲಗಂಬದ ತರಬೇತಿಯನ್ನು ಕೊಡಲಾಗುತ್ತಿದೆ.

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಶಲವಡಿಯಲ್ಲಿ ಎಪ್ರಿಲ್ ೧೭ ರಂದು ಪ್ರಾರಂಭವಾದ ಈ ಶಿಬಿರದಲ್ಲಿ ಮಕ್ಕಳಿಗೆ ಹಗ್ಗಮಲ್ಲಗಂಬ ಮತ್ತು ಯೋಗದ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ . ಈ ಶಿಬಿರದಲ್ಲಿ ೩೦ ಮಕ್ಕಳು ಪಾಲ್ಗೊಂಡು ತರಬೇತಿ ಪಡೆಯುತ್ತಿದ್ದಾರೆ. ಈ ತರಬೇತಿಯಲ್ಲಿ ಒಳ್ಳೆಯ ಆಸಕ್ತಿ ಮತ್ತು ಉತ್ತಮ ಪ್ರದರ್ಶನ ನೀಡುವ ೧೫ ಮಕ್ಕಳನ್ನು ರಾಜ್ಯ ಮಟ್ಟದ ಮಲ್ಲಗಂಬ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಈ ಶಿಬಿರದಲ್ಲಿ ಮಕ್ಕಳು ಬಹಳ ಆಸಕ್ತಿಯಿಂದ ಪಾಲ್ಗೊಂಡಿರುವುದು ಒಂದು ಸಂತಸದ ವಿಷಯ, ಕಡಿಮೆ ಅವಧಿಯಲ್ಲಿ ಹಲವಾರು ಆಸನಗಳನ್ನು ಕಲಿತು ತರಬೇತುದಾರರಿಗೆ ಮಕ್ಕಳು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ನಮ್ಮ ಪರಂಪರೆಯಲ್ಲೇ ಹಲವಾರು ಕ್ರೀಡೆಗಳು ಮತ್ತು ಸಾಹಸ ಕಲೆಗಳು ಇರುವಾಗ ಪಾಶ್ಚಾತ್ಯರ ಅನುಕರಣೆ ಏಕೆ? ನಮ್ಮ ಕಲೆಗಳನ್ನು ನಾವು ಉಳಿಸುವುದು ಅವಶ್ಯಕವಾಗಿದೆ. ಮಕ್ಕಳಲ್ಲಿ ಇಂತಹ ಕಲೆಗಳ ಮೇಲೆ ಆಸಕ್ತಿ ಮೂಡಿಸುವುದು ಒಳಿತು.

Wednesday, June 10, 2009

ಮಹಾವಿದ್ಯಾಲಯದಲ್ಲೊದು ಪ್ರಾಯೋಗಿಕ ಚಿತ್ರೀಕರಣ

ನಮ್ಮ ಮಹಾವಿದ್ಯಾಲಯದಲ್ಲಿ ಚರ್ಚಾಸ್ಪರ್ಧೆ ಮತ್ತು ಸಂದರ್ಶನದ ಪ್ರಾಯೋಗಿಕ ಛಾಯಾಚಿತ್ರನವನ್ನು ಮಾಡಲಾಗುತ್ತಿದೆ. ಧಿಮಂತ ಪ್ರಶಸ್ತಿ ಪುರಸ್ಕೃತರಾದ ಮತ್ತು ವಿದ್ಯಾಭಾರತಿ ಪ್ರತಿಷ್ಠಾನದ ಐ.ಎಂ.ಸಿ.ಆರ ಹುಬ್ಬಳ್ಳಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನಯನಾ ಗಂಗಾಧರವರ ಸಂದರ್ಶನವನ್ನು ದಿನಾಂಕ ೧೨-೬-೨೦೦೯ ರಂದು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಶನದಲ್ಲಿ ಪ್ರಭಾಕರ ಎಸ.ಸಿ ಮತ್ತು ಶ್ರೀನಿವಾಸ ರೆಡ್ಡಿ ಸಂದರ್ಶಕರಾಗಿ ಪಾಲ್ಗೊಳ್ಳಲಿದ್ದಾರೆ ಹಾಗೂ ವ್ಯಕ್ತಿತ್ವ ವಿಕಸನ ಎಂಬ ವಿಷಯದ ಚರ್ಚೆಯಲ್ಲಿ ಸವಿತಾ ಪಾವಟೆ , ಕೋಮಲ ಮೋಟಗಿ ಮತ್ತು ಸುಜಾತಾ ಗಾಂವ್ಕರ್ ಭಾಗವಹಿಸಲಿದ್ದಾರೆ . ಛಾಯಾಚಿತ್ರನವನ್ನು, ಪತ್ರಿಕೋದ್ಯಮದ ವಿದ್ಯಾರ್ಥಿಗಳೇ ನಿರ್ವಹಿಸಲಿದ್ದಾರೆ . ಈ ಪ್ರಾಯೋಗಿಕ ಚಿತ್ರೀಕರಣ ನಮಗೆ ಒಳ್ಳೆಯ ಅನುಭವ ತರುವಂತದ್ದಾಗಿದೆ ಮತ್ತು ಇದು ನಮಗೆ ಸವಾಲಿನ ಕೆಲಸವಾಗಿದೆ.

Tuesday, June 9, 2009

ಜಾತಿಯ ಆಧಾರದ ಮೇಲಿನ ಮೀಸಲಾತಿ ಬೇಡ!

ಮೀಸಲಾತಿ ಎಂದರೆ ನಮಗೆ ಗೊತ್ತೇ ಇದೆ, ಅಲ್ಪ ಸಂಖ್ಯಾತರು, ಪರಿಶಿಷ್ಟ ಪಂಗಡದವರು ಮತ್ತು ಹಿಂದುಳಿದ ವರ್ಗದವರಿಗೆ ಪ್ರೋತ್ಸಾಹ ಕೊಟ್ಟು ಇವರು ಕೂಡಾ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದೆ ಬರುವಂತೆ ಮಾಡುವ ವ್ಯವಸ್ಥೆಯಾಗಿದೆ. ನಮ್ಮ ಸಮಾಜದಲ್ಲಿ ಹಿಂದುಳಿದ ವರ್ಗ, ಜಾತಿಗಳೆನಿಸಿಕೊಂಡವರಿಗೆ ಪ್ರತೀ ಕ್ಷೇತ್ರದಲ್ಲೂ ಮೀಸಲಾತಿಯನ್ನು ನೀಡಲಾಗುತ್ತದೆ. ಶಿಕ್ಷಣದಿಂದ ಹಿಡಿದು ಕೆಲಸವನ್ನು ದೊರಕಿಸಿಕೊಡುವುದರ ತನಕ ಈ ಮೀಸಲಾತಿ ಹಿಂದುಳಿದ ವರ್ಗದವರಿಗೆ ಸಹಾಯ ಮಾಡುತ್ತದೆ.

ನಮ್ಮ ಸಮಾಜದಲ್ಲಿ ಹಿಂದೆ ಮೇಲ್ಜಾತಿಯವರು ಕೆಳಜಾತಿಯವರನ್ನು ಶೋಷನೆ ಮಾಡುತ್ತಿದ್ದನ್ನು ನಾವು ಇತಿಹಾಸದ ಮುಖಾಂತರ ತಿಳಿಯಬಹುದು. ಕೆಳಜಾತಿಯವರು ಯಾವುದೇ ಅನುಕೂಲಗಳನ್ನು ಹೊಂದದೆ, ಎಲ್ಲ ಅನೂಕೂಲತೆಗಳು ಮೇಲ್ಜಾತಿಯವರಿಗೆ ಮೀಸಲಿದ್ದವು ಎಂದರೆ ತಪ್ಪಾಗಲಾರದು. ಆ ಕಾರಣದಿಂದ ಸ್ವತಂತ್ರ್ಯ ನಂತರ ಸಂವಿಧಾನ ರಚಿಸುವಾಗ ಹಿಂದುಳಿದ ಜಾತಿ , ವರ್ಗದವರಿಗೆ ಅನುಕೂಲವಾಗಲೆಂದು ಮೀಸಲಾತಿ ಪದ್ಧತಿಯನ್ನು ಹೊರಡಿಸಿದರು.

ಆದರೆ ಇಂದಿನ ದಿನ ಮೊದಲಿನಂತೆ ಜಾತಿ, ಮೇಲು-ಕೀಳು, ಭೇದ-ಭಾವಗಳೆಂಬ ಅನಿಷ್ಟ ಪದ್ಧತಿಗಳು ಕಡಿಮೆಯಾಗಿವೆ ಎನ್ನಬಹುದು. ಸಮಾಜದಲ್ಲಿ ಸಮಾನತೆ ಕಾಣುತ್ತಿದೆ, ಇನ್ನುಮುಂದೆ ಮೀಸಲಾತಿ ಪದ್ಧತಿ ಅಷ್ಟೊಂದು ಅವಶ್ಯಕವಲ್ಲ ಎನ್ನಬಹುದು. ಏಕೆಂದರೆ ಇಂದಿನ ದಿನ ನಮ್ಮ ಸಮಾಜದಲ್ಲಿ ಮೇಲ್ಜಾತಿಯ ಎಷ್ಟೋ ಜನರು ಒಂದು ಹೊತ್ತಿಗೂ ಪರದಾಡುವ, ದಿನಗೂಲಿ ಮಾಡಿ ಜೀವನ ನಡೆಸುವವರನ್ನು ನಾವು ಕಾಣಬಹುದು. ಹಾಗಂತ ಈ ಮೀಸಲಾತಿ ಪದ್ಧತಿಯನ್ನೇ ನಿಲ್ಲಿಸಬೇಕೆಂದು ಹೇಳಲಾಗದು ಆದರೆ ಜಾತಿ ಆಧಾರದ ಮೇಲಿನ ಮೀಸಲಾತಿ ಬೇಡ.

ಮೇಲ್ಜಾತಿಯ ಜನರೆಲ್ಲರು ಶ್ರೀಮಂತರು, ಕೆಳಜಾತಿಯಲ್ಲಿ ಹುಟ್ಟಿದವರೆಲ್ಲರೂ ಬಡವರು ಎನ್ನಲ್ಲಾಗದು. ಎಷ್ಟೋ ಜನ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೋಡಿಸಲಾಗದೆ ಕೂಲಿ ಕೆಲಸಕ್ಕೆ ಕಳಿಸುತ್ತಾರೆ. ಇಂತವರಿಗೂ ಈ ಮೀಸಲಾತಿ ನ್ಯಾಯ ಒದಗಿಸಿಕೊಡಬೇಕಲ್ಲವೇ! ಆದ್ದರಿಂದ ಸರಕಾರ ಜಾತಿಯ ಮೇಲಿನ ಮೀಸಲಾತಿ ನಿಲ್ಲಿಸಿ ವ್ಯಕ್ತಿಯ ಆರ್ಥಿಕತೆಯ ಆಧಾರದ ಮೇಲಿನ ಮೀಸಲಾತಿಯನ್ನು ಹೊರಡಿಸಬೇಕು. ಅಂದಾಗ ಸಮಾಜದಲ್ಲಿನ ಭೇದ- ಭಾವ, ಮೇಲುಕೀಳು ನಿಲ್ಲುತ್ತದೆ. ದೈ

Monday, June 8, 2009

ಕುಂಬಾರಿಕೆ

ಕುಂಬಾರಿಕೆ ಮಾಡುದರಿಂದ ಏನು ಲಾಬಾನೇ ಇಲ್ಲಾ, ಅದು ನಮ್ಮ ಅಪ್ಪನ ಕಾಲಕ್ಕೆ ಮುಗೀತು ಹೀಗಂತ ಹೇಳಿದ್ದು ಯಲ್ಲಪ್ಪ ಕುಂಬಾರ. ನಮ್ಮ ಮನೆಯ ಮುಂದೆ ಯೆಲ್ಲಪ್ಪನ ಮನೆ ಇದೆ, ನಾವು ಸಣ್ಣವರಿದ್ದಾಗ ಯಲ್ಲಪ್ಪ ತನ್ನ ಅಪ್ಪನ ಜೊತೆ ಗಡಿಗೆ ತಯಾರಿಸುತ್ತಿದ್ದ. ಆದರೆ ಈಗ ಅದನ್ನು ಬಿಟ್ಟು ಪಂಚರ್ ಅಂಗಡಿ ಹಾಕಿಕೊಂಡಿದ್ದಾನೆ.
ಅವನಿಗೆ ಕುಂಬಾರಿಕೆ ಮಾಡಲು ಇಷ್ಟ ಆದರೆ ಅದರಿಂದ ಮನೆತನ ಸಾಗುವುದಿಲ್ಲವಲ್ಲ. ಆದರೂ ಯೆಲ್ಲಪ್ಪ ಆವಾಗಾವಾಗ ಮಣ್ಣಿನ ಒಲೆಗಳನ್ನು ಬೇರೆ ಕಡೆಯಿಂದ ತಂದು ಮಾರಾಟ ಮಾಡುತ್ತಾನೆ, ಆದರೆ ಅವನೇ ತಯಾರಿಸುವುದಿಲ್ಲ. ಇದಕ್ಕೆ ಕಾರಣ ಆಧುನಿಕರಣ ಎನ್ನಬಹುದು.
ಇಂದಿನ ದಿನ ಗಡಿಗೆಗಳ ಬಳಕೆಯನ್ನು ಜನರು ಕಡಿಮೆ ಮಾಡಿದ್ದಾರೆ ಅಥವಾ ನಿಲ್ಲಿಸಿಯೇ ಬಿಟ್ಟಿದ್ದಾರೆ ಅಂದರೆ ತಪ್ಪಾಗಲಾರದು. ಈ ಕಾರಣದಿಂದ ಮೊದಲಿನಿಂದ ಗಡಿಗೆ ತಯಾರಿಸುತ್ತ ಬಂದವರು ಅದನ್ನು ಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮೊದಲು ಅಡುಗೆ ಮಾಡುವುದಕ್ಕೆ, ನೀರು ಶೇಕರಿಸುವುದಕ್ಕೆ ಪ್ರತಿಯೊಂದಕ್ಕೂ ಮಣ್ಣಿನಿಂದ ತಯಾರ ಮಾಡಿದ ಗಡಿಗೆಗಳನ್ನೇ ಉಪಯೋಗಿಸುತ್ತಿದ್ದರು. ಈ ಮಣ್ಣಿನ ಗಡಿಗೆಗಳು ಆರೋಗ್ಯಕ್ಕೂ ಓಳ್ಳೆಯದು. ಈ ಗಡಿಗೆಗಳನ್ನ ಬಡವರ ಫ್ರಿಜ್ ಎನ್ನುತ್ತಾರೆ.
ಇಂತಹ ಕುಂಬಾರಿಕೆ ಮಾಡುವವರನ್ನು ವುಳಿಸಿ ಬೆಳೆಸುವದು ಅವಶ್ಯಕವಾಗಿದೆ. ಸರಕಾರ ಇವರಿಗೆ ಆರ್ಥಿಕವಾಗಿ ಬಲಿಷ್ಟರನ್ನಾಗಿಸಬೇಕು.

ಶುದ್ಧವಾಗಿರಲಿ ಈ ಜನಪದ


೧೨ ನೇ ಶತಮಾನದ ವಚನ ಸಾಹಿತ್ಯದ ನಂತರ ಬಂದ ಜನಪದ ಸಮಾಜ ಸುಧಾರಣೆಗೆ ಕೊಟ್ಟ ಕೊಡುಗೆ ಅಪಾರ. ಜನಪದಗಳು ಹಿಂದೆ ಸಮಾಜ ಸುಧಾರಣೆಗೆಂದು, ನೀತಿ-ನಿಯಮಗಳ ನೆನವಿಗಾಗಿ ಮತ್ತು ದಾರಿದೀಪಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು. ಸಮಾಜದ ಅನಿಷ್ಟಗಳನ್ನು ಹೋಗಲಾಡಿಸಲು ಈ ಜನಪದಗಳ ಬಳಕೆ ಇತ್ತು. ಆದರೆ ಇಂದು ಅದರ ವ್ಯತಿರಿಕ್ತವಾಗಿ ಜನಪದಗಳು ನಮ್ಮ ಸಮಾಜದಲ್ಲಿ ರೂಪ ಪಡೆದಿವೆ ಎಂದರೆ ತಪ್ಪಾಗಲಾರದು.


ಹಿಂದಿನ ಜನಪದ ಹಾಡುಗಳು ಕೇಳಲು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು ಸೂಕ್ತವಾಗಿದ್ದವು. ಆದರೆ ಇಂದಿನ ಕೆಲ ಜನಪದ ಹಾಡುಗಳು ವಿಚಿತ್ರ ಮತ್ತು ತಿಳಿಯಲಂತು ಅಸಹ್ಯಕರ. ಇಂದಿನ ಕೆಲ ಜನಪದಗಳು ಅಶ್ಲೀಲತೆಯ ಜಾಡ ಹಿಡಿದು ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ನನ್ನ ಹಳ್ಳಿಯಲ್ಲಿ ಒಬ್ಬ ಹಿರಿಯ ವ್ಯಕ್ತಿ ಇಂದಿನ ಜನಪದ ಹಾಡುಗಳ ಬಗ್ಗೆ ಹೇಳಿದ ಮಾತು ನೆನಪಿಗೆ ಬರುತ್ತದೆ, ‘ಮಂದ್ಯಾಗ ಕೇಳಿದ್ರ ಮರ್ಯಾದಿ ತಕ್ಕೊಂಡ ಹೋಗುದ ಇಂತಾ ಹಾಡ’ ಈ ಹಿರಿಯನ ಭಾವನೆ ಒಂದು ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುವಂತದ್ದು.


ಹಳ್ಳಿಗಳಲ್ಲಿ ಇದರ ಹಾವಳಿ ಹೆಚ್ಚು, ಟ್ರ್ಯಾಕ್ಟರ್(ವಾಹನ) ಗಳಲ್ಲಿ ಇಂತಹ ಅಶ್ಲೀಲ ಹಾಡುಗಳನ್ನು ಹಾಕ್ಕೊಂಡು ಹೊಂಟ್ರಂದ್ರ ಮನಿ ಬಾಕಲದಾಗ ನಿಂತ ಹೆಣ್ಣು ಮಕ್ಕಳು ಮನಿ ಒಳಗ ಹೊಗುತ್ತಾರೆ. ಅಂತಹ ಅವಮರ್ಯಾದೆಯನ್ನು ಇಂದಿನ ಕೆಲ ಜನಪದ ಹಾಡುಗಳು ಸೃಷ್ಟಿ ಮಾಡುತ್ತಿವೆ. ನಮ್ಮ ಸಂಸ್ಕೃತಿಯಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಸಮಾಜದ ಹಿತ ದೃಷ್ಟಿಯಿಂದ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿರುವುದು ಒಂದು ಸದುದ್ದೇಶದಿಂದ. ಆದರೆ ಇಂದಿನ ದಿನ ಸಣ್ಣ ಹುಡುಗನ ಬಾಯಲ್ಲಿ ಅಶ್ಲೀಲತೆಯ ಅಬ್ಬರ. ಇದಕ್ಕೆ ಕಾರಣ ಇಂತಹ ಅಶ್ಲೀಲ ಗೀತೆಗಳು ಎಂದರೆ ತಪ್ಪಾಗಲಾರದು.


ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು. ಎಂಬ ಬಸವಣ್ಣನವರ ವಚನದ ಅನುಕರಣೆ ಅವಶ್ಯಕ. ಸಮಾಜದ ಉದ್ಧಾರಕ್ಕಾಗಿ ಜನಪದ ವಾಗಬೇಕೆ ವಿನಹ ಮಾರಕಕ್ಕಾಗಬಾರದು. ಇಂತಹ ಅಶ್ಲೀಲ ಜನಪದಗಳು ವ್ಯಕ್ತಿಯ ವ್ಯಕ್ತಿತ್ವವನ್ನೇ ನಾಶ ಮಾಡುತ್ತವೆ, ಇನ್ನು ಮಕ್ಕಳ ಮನಸ್ಸಿನ ಮೇಲೆ ಇಂತಹ ಜನಪದ ಹಾಡುಗಳು ತೀವ್ರ ಪರಿಣಾಮ ಬೀರುತ್ತಿವೆ. ಆದ್ದರಿಂದ ಇಂತಹ ಅಶ್ಲೀಲ ಜನಪದಗಳ ಬಳಕೆ ನಿಲ್ಲಬೇಕು. ಸಾರ್ವಜನಿಕರು ಇದರ ಮೇಲೆ ನಿರ್ಭಂದನೆಗಳನ್ನು ಹೇರಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಹಾಡುಗಳನ್ನು ಕಾಣದಂತೆ ಮಾಡಬೇಕು.

Friday, June 5, 2009

ಹಿರಿಯರ ಮೌಲ್ಯಗಳಿಂದ ಯುವಕರ ವ್ಯಕ್ತಿತ್ವ ಸುಧಾರಣೆ ಸಾಧ್ಯ



ಯುವಕರಿಂದಲೇ ದೇಶದ ಸುಧಾರಣೆ ಸಾಧ್ಯ ಎಂದು ಹಿರಿಯರು ಹೇಳುವಂತೆ, ದೇಶದ ಸುಧಾರಣೆಗೆ ಯುವಕರ ಪಾತ್ರ ಅವಶ್ಯಕವಾಗಿದೆ. ಆದರೆ ಇಂದಿನ ಕೆಲವೊಂದು ಘಟನೆಗಳನ್ನು ನೋಡಿದರೆ ದೇಶದ ಮಾರಕಕ್ಕೆ ಯುವಕರ ಕ್ರೂರ ಕೃತ್ಯಗಳು ಕಾರಣವಾಗುತ್ತಿವೆ. ಭಯೋತ್ಪಾದನೆ, ಕೊಲೆ- ಸುಲಿಗೆ, ಅಂದಾನುಕರಣೆ, ಹೀಗೆ ಹಲವಾರು ಕೃತ್ಯಗಳಲ್ಲಿ ಯುವಕರು ತೊಡಗುತ್ತಿರುವುದು ಇಂದಿನ ದಿನ ಸರ್ವೇ ಸಾಮಾನ್ಯವಾಗಿದೆ.


ಸಾರ್ವಜಿಕ ಸ್ಥಳಗಳಾದ ಹೊಟೇಲ್, ಬಸ್ ಸ್ಟ್ಯಾಂಡ, ಪಾರ್ಕ್, ಸಭೆ ಸಮಾರಂಭಗಳಲ್ಲಿ ಯುವಕರ ವರ್ತನೆ ತುಂಬ ವಿಚಿತ್ರವಾಗಿರುತ್ತದೆ. ಈ ವಿಚಿತ್ರ ವರ್ತನೆ ಉಳಿದವರ ಮನಸ್ಸಿಗೆ ನೋವಾಗುವಂತೆ ಮಾಡುತ್ತದೆ. ಇಂತಹ ವರ್ತನೆಗಳಿಗೆ ಹಲವಾರು ಕಾರಣಗಳಿವೆ. ಮುಖ್ಯ ಕಾರಣವೆಂದರೆ ಮಾರ್ಗದರ್ಶನದ ಕೊರತೆ ಮತ್ತು ಹಿರಿಯರ ಮೌಲ್ಯಗಳಿಂದ ವಂಚಿತರಾಗುಳಿಯುವುದು. ಮೊದಲು ಒಂದು ಮಗು ಜನಿಸಿದ ನಂತರ ಅದರ ಬೆಳವಣಿಗೆಗೆ ಬೇಕಾದ ಒಳ್ಳೆಯ ವಾತಾವರಣವನ್ನು ತಂದೆ ತಾಯಿ ಮತ್ತು ಆ ಕುಟುಂಬದ ಸದಸ್ಯರು ಕೊಡುತ್ತಿದ್ದರು. ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ತಂದೆ ತಾಯಿ ಮತ್ತು ಕುಟುಂಬದ ಪಾತ್ರ ಮುಖ್ಯವಾದುದು.


ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗುವುದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಬೆಳೆಸುವುದು ಒಳ್ಳೆಯದು. ಹಿಂದೆ ತಂದೆ ತಾಯಿಯಾದವರು ಮಗುವಿಗೆ ಶಿವಶರಣರ, ಮಹಾಪುರುಷರ ಕಥೆಗಳನ್ನು ಹೇಳುತ್ತ, ಒಳ್ಳೆಯ ಮೌಲ್ಯಗಳನ್ನು ಹೇಳುತ್ತ ಆ ಮಗುವಿನ ನಡೆ, ನುಡಿ, ಒಳ್ಳೆಯ ಸಂಸ್ಕೃತಿ ಬೆಳೆಸಲು ಕಷ್ಟ ಪಡುತ್ತಿದ್ದಳು. ಆದರೆ ಇಂದಿನ ದಿನಗಳಲ್ಲಿ ಆಧಿನಿಕತೆಯ ಯಂತ್ರಕ್ಕೆ ಸಿಕ್ಕು ಮಗುವಿನ ಬೆಳವಣಿಗೆ ಮತ್ತು ಭವಿಷ್ಯದ ಬಗ್ಗೆ ಚಿಂತಿಸುವಷ್ಟು ಪುರುಸೊತ್ತು ಇಂದಿನ ತಂದೆ- ತಾಯಂದಿರ ಹತ್ತಿರವಿಲ್ಲ. ಎಲ್ಲರು ಕೆಲಸದ ಒತ್ತಡದಲ್ಲಿರುವುದರಿಂದ ಮಕ್ಕಳನ್ನು ಯಾವುದೋ ಆಯಾ ಹತ್ತಿರ ಬಿಟ್ಟು ಹೋಗುತ್ತಾರೆ. ಇದರಿಂದ ಮಗು ತಂದೆ- ತಾಯಿಯ ಪ್ರೀತಿಯಿಂದ ಮತ್ತು ಮಾರ್ಗದರ್ಶನದಿಂದ ವಂಚಿತವಾಗುತ್ತದೆ.


ಈ ರೀತಿ ಒಳ್ಳೆಯ ಮಾರ್ಗದರ್ಶನ ಸಿಗದೇ ಹೋದ ಮತ್ತು ನಿರ್ಲಕ್ಷಕ್ಕೆ ಒಳಗಾದ ಮಕ್ಕಳು ಮುಂದೆ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇಂದಿನ ದಿನ ನಾವು ನೋಡುವಂತೆ ಕೆಲವೊಂದು ಯುವಕರು ಮಧ್ಯಸೇವನೆ ಮಾಡಿ ಸಭ್ಯ ಜನರನ್ನು ಹೀಯಾಳಿಸುವುದು ಮತ್ತು ಮಹಿಳೆಯರನ್ನು ಚುಡಾಯಿಸುವುದು ಮತ್ತು ಕಾನೂನಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಬೈಕ್ ಓಡಿಸುವುದು ಹೀಗೆ ಅಸಭ್ಯವಾಗಿ ನಡೆದುಕೊಳ್ಳುವುದು ಸಾಮಾನ್ಯವಾಗಿದೆ. ಆದ ಕಾರಣ ಹಿರಿಯರು ತಂದೆ ತಾಯಿಗಳು ಮಕ್ಕಳ ಬೆಳವಣಿಗೆಯಲ್ಲಿ ನಿಗಾ ವಹಿಸಬೇಕು.

Thursday, June 4, 2009

ರೈತನೇ ನಿಜವಾದ ಕೃಷಿ ವಿಜ್ಣಾನಿ



ವಿಜ್ಞಾನ ಅಭಿವೃದ್ಧಿ ಹೊಂದಿದಂತೆ ಹಲವಾರು ಬದಲಾವಣೆಗಳನ್ನು ನಾವು ನಮ್ಮ ಜೀವನದಲ್ಲಿ ಕಾಣುತ್ತಿದ್ದೇವೆ. ಹಾಗೆ ಕೃಷಿಯಲ್ಲಿಯೂ ಕೂಡ ಗಣನೀಯ ಬದಲಾವಣೆಗಳು ಆಗುತ್ತಿರುವದನ್ನು ನಾವು ಗಮನಿಸಬಹುದಾಗಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆದ ಹಸಿರು ಕ್ರಾಂತಿ ಕೃಷಿ ರಂಗದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತಂದಿತು. ಆ ಸಮಯದಲ್ಲಿ ಕೃಷಿ ವಿಜ್ಞಾನಿಗಳು ಹೈಬ್ರೀಡ್ ತಳಿಗಳನ್ನು ಕಂಡು ಹಿಡಿದು ರೈತರಿಗೆ ಬೆಳೆಯಲು ಕೊಟ್ಟರು. ಸಾವಯವ ಪ್ರಧಾನವಾಗಿದ್ದ ಕೃಷಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅಪರಿಮಿತ ಬಳಕೆಯಲ್ಲಿ ಭೂಮಿ ನಲುಗುವಂತಾಯಿತು.



ರೈತ ಅಧಿಕ ಬೆಳೆ ಬೆಳೆದು ಹೆಚ್ಚಿನ ಉತ್ಪನ್ನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ. ರೈತರು ಕುಲಾಂತರಿ ತಳಿಯ ಹೈಬ್ರೀಡ್ ಬೀಜಗಳನ್ನು ಬಿತ್ತುತ್ತ ದೇಶಿ ಮೂಲದ ತಳಿಗಳನ್ನು ಮರೆಯತೊಡಗಿದ. ಸಾವಯವ, ಕೊಟ್ಟಿಗೆ ಗೊಬ್ಬರಗಳ ಬದಲು ರಾಸಾಯನಿಕ ಗೊಬ್ಬರಗಳನ್ನು ಬಳಸಲು ಪ್ರಾರಂಭಿಸಿದ. ಮೊದಲು ರೈತ ತನ್ನ ಮನೆಯಲ್ಲಿ ಸಾಕಿದ ಜಾನುವಾರುಗಳ ಸಗಣಿಯಿಂದ ಗೊಬ್ಬರವನ್ನು ತಯಾರಿಸಿ ಕೃಷಿ ಭೂಮಿಗೆ ಬಳಸುತ್ತಿದ್ದ, ಆದರೆ ಅದು ಇಂದಿನ ದಿನ ಕಡಿಮೆಯಾಗಿದೆ.



ಭಾರತೀಯ ಕೃಷಿ ಜಾಗತೀಕರಣದ ಸುಳಿಗೆ ಸಿಕ್ಕು ನಲಗುತ್ತಿದೆ. ರೈತ ತನ್ನ ಕೃಷಿ ಮೌಲ್ಯಗಳನ್ನು ಮರೆತು ಪಾಶ್ಚಾತ್ಯರ ಕೃಷಿ ಪದ್ಧತಿಗೆ ಮೊರೆ ಹೋಗುತ್ತಿದ್ದಾನೆ. ರೈತ ಕುಲಾಂತರಿ ತಳಿಗಳನ್ನು ಉಪಯೋಗಿಸಲು ಪ್ರಾರಂಭಿಸಿದ್ದರಿಂದ ಎಷ್ಟೋ ಮೂಲ ದೇಶಿ ಬೀಜ ತಳಿಗಳು ಕಣ್ಮರೆಯಾದವು. ಆದಕಾರಣ ರೈತರು ದೇಶಿ ತಳಿಗಳ ಸಂರಕ್ಷಣೆಗೆ ಮುಂದಾಗಬೇಕಾದುದು ಅವಶ್ಯಕವಾಗಿದೆ.



ವೈರಸ್, ಬ್ಯಾಕ್ಟೀರಿಯಾ, ಚೇಳು, ಜೇಡ ಮತ್ತಿತರ ಜೀವಿಗಳಿಂದ ವಂಶವಾಹಿಗಳನ್ನು ಹೊರತಗೆದು ಬದನೆ, ಬೆಂಡೇಕಾಯಿ, ಆಲೂಗಡ್ಡೆ, ಟೊಮ್ಯಾಟೋ ಮತ್ತು ಮೆಕ್ಕೇಜೋಳದಂಥ ಆಹಾರ ಧಾನ್ಯಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸಲಾಗುತ್ತ್ದದೆ, ಇದೇ ಕುಲಾಂತರಿ ಆಹಾರ ಧಾನ್ಯ . ಕುಲಾಂತರಿ ಆಹಾರ ಧಾನ್ಯಗಳನ್ನು ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಪರೀಕ್ಷಿಸಿದಾಗ ಅವುಗಳ ಆರೋಗ್ಯ ಹದಗೆಟ್ಟ ಆತಂಕಕಾರಿ ಸಂಗತಿ ಪತ್ತೆಯಾಗಿದೆ. ಇಷ್ಟೇ ಅಲ್ಲದೆ ಸಾಕಷ್ಟು ಇಲಿಗಳು ಅಕಾಲಿಕ ಸಾವಿಗೆ ತುತ್ತಾಗಿವೆ. ಕುಲಾಂತರಿ ಆಹಾರ ಸೇವಿಸಿದ ಪ್ರಾಣಿಗಳ ಸಂತಾನ ಶಕ್ತಿ ಕುಂಠಿತಗೊಂಡು ಅವುಗಳ ಅಂಗಗಳು ಹಾಗೂ ಕೋಶಗಳು ಹಾನಿಗೆ ಈಡಾಗಿವೆ ಎಂಬುದನ್ನು ವಿಜ್ಞಾನಿಗಳಿಂದ ತಿಳಿಯಲಾಗಿದೆ.



ಒಮ್ಮೆ ಕುಲಾಂತರಿ ಬೆಳೆ ಬೆಳೆಯಲು ಆರಂಭವಾರೆ ನಿಸರ್ಗದಲ್ಲಿನ ವಂಶವಾಹಿ ವ್ಯವಸ್ಥೆ ಸಂಪೂರ್ಣ ಬುಡಮೇಲಾಗುವ ಸಾಧ್ಯತೆ ಇದೆ. ಈ ಕುಲಾಂತರಿ ಬೆಳೆಗಳಿಂದಾಗುವ ದುಷ್ಪರಿನಾಮವನ್ನರಿತ ಹಲವಾರು ಪ್ರಮೂಕ ವಿಜ್ಞಾನಿಗಳೂ ಇದನ್ನು ವಿರೋಧಿಸಿದ್ದಾರೆ. ಆದ್ದರಿಂದ ಈ ಕುಲಾಂತರಿಯನ್ನು ನಮ್ಮ ಸರ್ಕಾರ ನಿಷೇಧಿಸುವ ಅವಶ್ಯಕತೆ ಇದೆ. ನಮ್ಮ ಕೃಷಿ ವಿಶ್ವ ವಿದ್ಯಾಲಯಗಳು ದೇಶಿ ತಳಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕಾದ ಅವಶ್ಯಕತೆ ಇದೆ.



ಭಾರತ ಶೇ೭೫ರಷ್ಟು ಜನರ ಉದ್ಯೋಗ ಕೃಷಿ, ಆದರೂ ಆಹಾರ ಧಾನ್ಯಗಳಿಗೆ ಬೇರೆ ರಾಷ್ಟ್ರವನ್ನು ಅವಲಂಭಿಸಿರುವುದು ವಿಷಾದನೀಯ. ಆದ್ದರಿಂದ ಸರ್ಕಾರ ಕೃಷಿಗೆ ಹೆಚ್ಚು ಒತ್ತು ಕೊಟ್ಟು ಒಳ್ಳೆಯ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಮತ್ತು ರೈತರನ್ನು ಆರ್ಥಿಕವಾಗಿ ಸ್ತೂಲರನ್ನಾಗಿಸಲು ಹೆಚ್ಚು ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಬೇಕು.

Wednesday, June 3, 2009

ಅವಮಾನಕರವಾಗದಿರಲಿ ಈ ಅನುಕರಣೆ


ಮನುಷ್ಯನ ಜೀವನದಲ್ಲಿ ಅನುಕರಣೆ ಅವಶ್ಯಕ ಮತ್ತು ಅನಿವಾರ್ಯ. ಆದರೆ, ಆ ಅನುಕರಣೆ ಅವಮಾನಕರವಾಗಬಾರದು. ಈಗಿನ ನಮ್ಮ ಜೀವನ ಶೈಲಿಗೂ ಮತ್ತು ನಮ್ಮ ಹಿಂದಿನ ಸಂಸ್ಕೃತಿಗೂ ಹೋಲಿಸಿದರೆ ಬಹಳ ವ್ಯತ್ಯಾಸ ಕಂಡುಬರುತ್ತದೆ. ಇದಕ್ಕೆ ಕಾರಣ ಅನುಕರಣೆ.


ಪಾಶ್ಚಾತ್ಯರ ಆಕ್ರಮನಗಳ ನಂತರ ನಮ್ಮ ಸಮಾಜದಲ್ಲಿ ಹಲವಾರು ಬದಲಾವಣೆಗಳು ತೀವ್ರಗತಿಯಲ್ಲಿ ಆದವು. ಉಡುಗೆ-ತೊಡುಗೆಗಳಲ್ಲಿ, ಊಟ-ಉಪಚಾರಗಳಲ್ಲಿ, ಆಡುವ ಮಾತಿನಲ್ಲಿ, ಮೌಲ್ಯ-ಸಿದ್ಧಾಂತಗಳಲ್ಲಿ ಹೀಗೆ ಪ್ರತಿಯೊಂದರಲ್ಲೂ ಹಲವಾರು ಬದಲಾವಣೆಗಳಾದವು. ಇದಕ್ಕೆ ಕಾರಣ ಅನುಕರಣೆ ಎನ್ನಬಹುದು.


ಅನುಕರಣೆ ಎಂಬ ಪ್ರಕ್ರಿಯೆ ನಮ್ಮ ಸಂಪ್ರದಾಯ ಮತ್ತು ಸುಸಂಸ್ಕೃತ ಜೀವನ ಮಟ್ಟವನ್ನೇ ಬದಲಾಯಿಸಿಬಿಟ್ಟಿದೆ. ಈ ಅನುಕರಣೆ ಎಂಬ ಪ್ರಕ್ರಿಯೆ ಆಧುನಿಕತೆಯಿಂದ ಮತ್ತೆ ಪ್ರಾಚೀನತೆಗೆ ಕರೆದೋಯುತ್ತಿದೆ ಎಂದರೆ ತಪ್ಪಾಗಲಾರದು. ಹಿಂದೆ ಅಂದರೆ, ಪ್ರಾಚೀನ ಯುಗದಲ್ಲಿ ಮನುಷ್ಯ ಮೈಮೇಲೆ ಬಟ್ಟೆಗಳನ್ನು ಉಪಯೋಗಿಸದೆ ಬೆತ್ತಲೆಯಾಗಿ , ಸಿಕ್ಕ ಸಿಕ್ಕ ಪ್ರಾಣಿಗಳನ್ನು ಹಿಡಿದು ತಿಂದು ಬಿಡುತ್ತಿದ್ದ. ಅವನಿಗೆ ಸಂಬಂಧ, ಕಣಿಕರ, ಪ್ರೀತಿ- ವಾತ್ಸಲ್ಯಗಳ ಅರಿವು ಇರಲಿಲ್ಲ.


ಆ ಪ್ರಾಚೀನ ಮಾನವ ಸುಧಾರಿಸುತ್ತ ಆಧುನಿಕತೆಗೆ ಸಾಗಿ ಬಂದು ತನ್ನ ಹಲವಾರು ಕ್ರೂರತೆ ಮತ್ತು ಅಂಧತೆಗಳನ್ನು ಹೋಗಲಾಡಿಸಿ ಮಾನವೀಯತೆಯ ಜೀವನ ನಡೆಸತೊಡಗಿದ. ಈ ಹಂತಕ್ಕೆ ಬಂದ ಮಾನವ ಅಂದರೆ ಈಗಿರುವ ನಾವು ಉತ್ತಮ ಮೌಲ್ಯಗಳನ್ನು ಮತ್ತು ಮಾನವೀಯತೆಯ ಜೀವನವನ್ನು ಮರೆತು ಮತ್ತೆ ಪ್ರಾಚೀನ ಮಾನವರಾಗಲು ಹೊರಟಿದ್ದೇವೆ ಎಂಬುದು ಇಂದಿನ ದಿನ ಪಾಶ್ಚಾತ್ಯರಲ್ಲಿ ಬಟ್ಟೆಯ ಮೇಲಿನ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ನೋಡಿದರೆ ತಿಳಿಯುತ್ತದೆ. ಈ ಪಾಶ್ಚಾತ್ಯರ ಜೀವನ ಶೈಲಿ ಇತ್ತೀಚೆಗೆ ನಮ್ಮಲ್ಲಿಯೂ ಕಾಣುತ್ತಿದೆ.


ಇನ್ನು ಇಂದಿನ ಆಹಾರದ ಬಗ್ಗೆ ಮಾತಾಡೋನ, ನಮ್ಮ ಸಮಾಜದಲ್ಲಿ ಮೊದಲಿನಿಂದ ಅಹಿಂಸೆಯೇ ನಮ್ಮ ಧರ್ಮ, ದಯೆ ಇರಲಿ ಸಕಲ ಪ್ರಾಣಿಗಳಲ್ಲಿ ಎಂಬ ತತ್ವದ ಆಚರಣೆ ಇತ್ತು. ಆದರೆ ಇಂದು ಪಾಶ್ಚಾತ್ಯರ ಆಹಾರ ಪದ್ಧತಿಯ ಅನುಕರಣೆಯಿಂದ ನಮ್ಮವರು ಕೂಡ ಹಿಂಸೆಯ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಭೂಮಿಯ ಮೇಲಿನ ಪ್ರತಿಯೊಂದು ಪ್ರಾಣಿಯನ್ನು ಮನುಷ್ಯ ಸ್ವಲ್ಪವೂ ಸಂಕೋಚ, ಕಣಿಕರವಿಲ್ಲದೆ ಭಕ್ಷಿಸುತ್ತಾನೆ. ಇದು ಪ್ರಾಚೀನ ಜೀವನಕ್ಕೆ ಹೋಲಿಕೆಯಾಗುತ್ತದೆ.


ಇನ್ನೊಂದು ಸಮಾಜದ ಅನುಕರಣೆ ಹೇಗೆ ನಡೆಯುತ್ತ ಹೋಗುತ್ತದೆಯೊ ಹಾಗೆ ತನ್ನತನವನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಹಾಗೇ ಇಂದು ನಮ್ಮ ಸಮಾಜದಲ್ಲಿ ಪ್ರತಿಯೊಂದರಲ್ಲೂ ಪಾಶ್ಚಾತ್ಯರ ಜೀವನ ಶೈಲಿಯನ್ನೇ ಕಾಣುತ್ತೇವೆ ವಿನಃ ನಮ್ಮತನವನ್ನಲ್ಲ. ೧೨ ನೇ ಶತಮಾನದ ಬಸವಣ್ಣನವರು ಸಮಾಜದ ಸುಧಾರಣೆಗೆ ಮತ್ತು ನಮ್ಮ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿದರು. ವಿವೇಕಾನಂದರು ಭಾರತವೇ ಶ್ರೇಷ್ಟ ಎಂಬ ಮಂತ್ರ ಸಾರಿದರು. ಆದರೆ ನಾವು ಇಂದು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆತು ಪಾಶ್ಚಾತ್ಯರ ಅನುಕರಣೆ ಮಾಡುತ್ತಿದ್ದೇವೆ, ಇದು ಎಷ್ಟರ ಮಟ್ಟಿಗೆ ಸರಿ?


ನಮ್ಮ ದೇಶ ಹಿಂದಿನಿಂದಲೂ ತನ್ನದೆ ಆದ ವೈಶಿಷ್ಟ್ಯಗಳನ್ನು ಕಾಪಾಡಿಕೊಂಡು ಬಂದಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಬೇರೆಯವರ ಒಳ್ಳೆಯ ವಿಚಾರಗಳನ್ನು ಅನುಕರಣೆ ಮಾಡುವುದು ತಪ್ಪಲ್ಲ ಹಾಗಂತ ನಮ್ಮತನವನ್ನು ಮರೆಯುವುದು ತಪ್ಪು. ಕ್ಷನಿಕ ಸುಕಕ್ಕೋಸ್ಕರ ಇರುವ ನೀತಿಗಳನ್ನು ನಾವು ಅನುಕರಿಸುವುದು ಬಹಳ ಹೇಯ್ಯ.

Saturday, May 30, 2009

ಜಲಿಯನ್ ವಾಲಾಬಾಗ್ ಹತ್ಯಾಖಾಂಡ


ಅಸಂಖ್ಯಾತ ವೀರರ ತ್ಯಾಗದ ಬಲಿದಾನದ ಪ್ರತೀಕವೇ ಇಂದಿನ ಸ್ವತಂತ್ರ್ಯ ಭಾರತ. ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಹಲವಾರು ಭಾರತೀಯರ ರಕ್ತದ ಕಲೆಗಳಿವೆ. ಕ್ರೂರ ಬ್ರಿಟೀಷರ ಕಪಿಮುಷ್ಟಿಯಿಂದ ಭಾರತ ಮಾತೆಯನ್ನು ಸ್ವತಂತ್ರ್ಯಗೊಳಿಸಲು ಸಹಸ್ರಾರು ಜನರು ಪ್ರಾಣ ಬಲಿದಾನ ಮಾಡಿದ್ದಾರೆ. ಅದಕ್ಕೆ ಒಂದು ನಿದರ್ಶನ ಜಲಿಯನ್ ವಾಲಾಬಾಗ್.


ಎಪ್ರೀಲ್ ೧೩, ೧೯೧೯ ಆ ವೈಶಾಖಿನ ಸಮಯ ಕ್ರೂರ ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು ಎರೆಡು ಸಾವಿರ ಮುಗ್ಧ ಹಿಂದು, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಪಾವನವಾದ ಪ್ರದೇಶ ಜಲಿಯನ್ ವಾಲಾಬಾಗ್, ಗಾಂಧೀಜಿ, ಡಾ. ಕಿಚ್ ಲ್ಯೂ ಮತ್ತು ಡಾ.ಸತ್ಯಪಾಲ್ ಅವರನ್ನು ಬ್ರಿಟೀಷ ಸರ್ಕಾರ ಬಂಧನಕ್ಕೊಳಪಡಿಸಿದ್ದರಿಂದ ಆಕ್ರೋಶಗೊಂಡ ಜನ ಪ್ರತಿಕಾರಕ್ಕಾಗಿ ಕಾಯುತ್ತಿದ್ದ ಸಮಯವದು, ಈ ಹಿನ್ನಲೆಯಲ್ಲಿ ಸುಮಾರು ಇಪ್ಪತ್ತು ಸಾವಿರ ಜನರು ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಸಭೆ ಸೇರಿದ್ದರು. ಆ ಸಭೆಯ ಭಾಷಣಕಾರ ಹಂಸರಾಜ್.


ಬ್ರಿಟೀಷರ ವಿರುದ್ಧ ಹೋರಾಡುತ್ತಿರುವ ಭಾರತೀಯರನ್ನು ಬಗ್ಗುಬಡಿಯಬೇಕೆಂದು ಕಾಯುತ್ತಿದ್ದ ಅಂದಿನ ಬ್ರಿಟೀಷ ಸೇನಾಧಿಕಾರಿ ಇ.ಎಚ್.ಡಯರ್ ಗೆ ಜಲಿಯನ್ ವಾಲಾಬಾಗ್ ಒಂದು ವ್ಯವಸ್ಥಿತವಾದ ಸ್ಥಳವಾಗಿತ್ತು. ಈ ಇಕ್ಕಟ್ಟಾದ ಸ್ಥಳದಲ್ಲಿ ಡಯರ್ ತನ್ನ ಸೈನ್ಯದ ತುಕುಡಿಗಳಿಂದ ಆ ಸಭೆಯ ಜನರ ಮೇಲೆ ಒಟ್ಟು ೧,೬೫೦ ಸುತ್ತುಗಳಷ್ಟು ಗುಂಡಿನ ಮಳೆ ಸುರಿಸಿದ, ಕ್ರೂರಿ ಡಯರ್ ಸ್ವಲ್ಪವೂ ಕರುಣೆಯಿಲ್ಲದೆ ಸೇರಿದ ಸುಮಾರು ೨೦ ಸಾವಿರ ಜನರಲ್ಲಿ ೧೫೧೬ ಜನರ ಸಾವಿಗೆ ಕಾರಣನಾದ. ೧೦ ನಿಮಿಷದಲ್ಲಿ ಆ ಸಭೆ ರಕ್ತಮಯವಾಗಿ ರಾಸಿರಾಸಿ ಹೆಣಗಳಿಂದ ಕೂಡಿತು.


೧೯೧೯ರ ಮಾರಣ ಹೋಮದಲ್ಲಿ ವೀರ ಮರಣವನ್ನಪ್ಪಿದವರ ಕುಟುಂಬಗಳು ಅನಾಥವಾದವು. ಗಾಂಧೀಜಿಯವರ ಶಾಂತಿ, ಅಹಿಂಸೆಯ ತತ್ವಕ್ಕೆ ಬದ್ಧರಾಗಿದ್ದ ಜನರು ಹಿಂಸೆಯಿಂದ ಬೆಂದುಹೋದರು. ಈ ಮಾರಣ ಹೋಮದಿಂದ ಇಡೀ ಭಾರತವೇ ರೋಷದಿಂದ ಗುಡುಗಿತು. ಸುಭಾಷ ಚಂದ್ರ ಬೋಸ್, ರವೀಂದನಾಥ ಟಾಗೋರ್ ನಂತ ಕ್ರಾಂತಿವೀರರು ಸಿಡಿದೆದ್ದರು. ಗಾಂಧೀಜಿ ಮತ್ತು ಟಾಗೋರ ರವರು ತಮಗೆ ಬಂದಿದ್ದ ಬಿರುದುಗಳನ್ನು ಬ್ರಿಟೀಷ ಸರ್ಕಾರಕ್ಕೆ ಹಿಂತಿರುಗಿಸಿದ್ದು ಈ ಸಮಯದಲ್ಲೇ. ಅಂದಿನ ಜಲಿಯನ್ ವಾಲಾಬಾಗ್ ಹತ್ಯಾಖಾಂಡ ೧೯೪೭ರ ಸ್ವತಂತ್ರ್ಯ ಸಂಗ್ರಾಮಕ್ಕೆ ಅಡಿಪಾಯವಾಯಿತು.


ಹೀಗೆ ಭಾರತಕ್ಕಾಗಿ ಸಹಸ್ರಾರು ವೀರರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು, ಭಾರತಾಂಬೆಗೆ ಪ್ರಾಣ ತ್ಯಾಗ ಮಾಡಿದ ವೀರರಿಗೆ ಶಾಂತಿ ಕೋರುವುದು ತಮ್ಮ ಕರ್ತವ್ಯ ಮತ್ತು ಈಗಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ.

ಉಚ್ಛಾಟಿಸಿ ಈ ಭಿಕ್ಷಾಟನೆಯನ್ನು



ಭಿಕ್ಷಾಟನೆ ಒಂದು ಸಾಮಾಜಿಕ ಪಿಡುಗು ಹಾಗೂ ಅಪರಾಧ, ಕರ್ನಾಟಕ ಭಿಕ್ಷಾಟನೆ ನಿಷೇದ ಅಧಿನಿಯಮ ೧೯೭೫ ರ ಸೆಕ್ಷೆನ್ ೩ರ ಅನ್ವಯ ಭಿಕ್ಷೆಬೇಡುವುದನ್ನು ನಿಷೇಧಿಸಲಾಗಿದೆ. ಭಿಕ್ಷೆ ಬೇಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.



ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯಿದೆ ೧೯೭೫ ರ ಸೆಕ್ಷೆನ್ ೧೨ ರನ್ವಯ ಭಿಕ್ಷಾಟನೆಯಲ್ಲಿ ತೊಡಗಿದ ಅಪರಾಧಕ್ಕಾಗಿ ಗರಿಷ್ಠ ೩ ವರ್ಷದವರೆಗೆ ಶಿಕ್ಷೆಗೆ ಗುರಿಪಡಿಸಲು ಅವಕಾಶವಿದೆ. ಇಷ್ಟೆಲ್ಲಾ ಕಾಯ್ದೆ, ಕಾನೂನುಗಳಿದ್ದರೂ ಭಿಕ್ಷಾಟನೆ ಪ್ರಚಲಿತವಿರುವುದು ವಿಷಾದನೀಯ . ಈ ಭಿಕ್ಷಾಟನೆ ಪಿಡುಗಿನಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹೊರತಾಗಿಲ್ಲ. ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಾದ ದೇವಾಲಯ, ಚರ್ಚ, ಮಸೀದಿ, ಬಸ್ ನಿಲ್ದಾಣ, ರೇಲ್ವೇ ನಿಲ್ದಾಣ ಮತ್ತು ಸಿನಿಮಾ ಮಂದಿರಗಳ ಮುಂದೆ ಹಾಗೂ ಮನೆ, ಅಂಗಡಿ ಮುಂತಾದ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಿರುವವರನ್ನು ನಾವು ಕಾಣಬಹುದು.



ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಇಂಥಹ ಭಿಕ್ಷುಕರನ್ನು ದೃಷ್ಠಿಯಲ್ಲಿಟ್ಟುಕೊಂಡು `ನಿರಾಶ್ರಿತರ ಪರಿಹಾರ ಕೇಂದ್ರ'ಗಳನ್ನು ತೆರೆದಿದೆ. ಕರ್ನಾಟಕದ ಒಟ್ಟು ೧೪ ಜಿಲ್ಲೆಗಳಲ್ಲಿ ಈ ನಿರಾಶ್ರಿತರ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ. ಅದೇ ರೀತಿ ಹುಬ್ಬಳ್ಳಿಯ ರಾಯಾಪುರದಲ್ಲಿ `ನಿರಾಶ್ರಿತರ ಪರಿಹಾರ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ.



ಈ ಕೇಂದ್ರದಲ್ಲಿ ೯೮ ಪುರುಷರು ಮತ್ತು ೨೬ ಮಹಿಳೆಯರಿಗೆ ಆಶ್ರಯ ನೀಡಲಾಗಿದೆ. ಇಲ್ಲಿರುವ ನಿರಾಶ್ರಿತರಿಗೆ ಫೈಲ್ ಮತ್ತು ಫಿನಾಯಿಲ್ ತಯಾರಿಸುವ ತರಬೇತಿಯನ್ನು ಕೊಟ್ಟು ಅವರಿಂದಲೇ ತಯಾರ ಮಾಡಿಸುತ್ತಾರೆ. ತಿಂಗಳಿಗೆ ಎರೆಡು ಸಾರಿ ವೈದ್ಯರನ್ನು ಇಲ್ಲಿಗೆ ಕರೆಯಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ಒಬ್ಬ ವ್ಯಕ್ತಿಯನ್ನು ೬ ತಿಂಗಳಿಂದ ೩ ವರ್ಷದವರೆಗೆ ಈ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಇಟ್ಟುಕೊಂಡು, ನಂತರ ಅವನಿಗೆ ಭಿಕ್ಷೆಯಲ್ಲಿ ತೊಡಗದಂತೆ ಕಟ್ಟಳೆಗಳನ್ನು ಹಾಕಿ ಅವರನ್ನು ಬಿಡಲಾಗುತ್ತದೆ.



ರಾಯಾಪುರ ನಿರಾಶ್ರಿತರ ಪರಿಹಾರ ಕೇಂದ್ರದ ಸುಪಿರಿಯೆಂಟೆಡ್ ಆದ ಶ್ರೀ ದಿವಾಕರ್ ಶಂಕಿನದಾಸರ್ ಹೇಳಿದ್ದು ಹೀಗೆ, ಭಿಕ್ಷುಕರು ಹೆಚ್ಚಾಗಲು ಕಾರಣ ಧಾನಿಗಳು, ಭಿಕ್ಷಾಟನೆ ಕಡಿಮೆಯಾಗಬೇಕಾದರೆ ಭಿಕ್ಷೆ ನೀಡುವುದನ್ನು ನಿಲ್ಲಿಸಬೇಕು. ಇಂದಿನ ಕೆಲಸದ ಒತ್ತಡದಲ್ಲಿ ಮತ್ತು ಅವಿಭಕ್ತ ಕುಟುಂಬಗಳ ಹೆಚ್ಚಳದಿಂದ ಕುಟುಂಬದಲ್ಲಿರುವ ವೃದ್ಧರು, ಅಂಗವೈಕಲ್ಯ ಹೊಂದಿದವರು ಬೀದಿಗೆ ಬರುವಂತಾಗಿದೆ.



ಭಿಕ್ಷುಕರನ್ನು ತಂದು ಅವರಿಗೆ ಊಟ, ಬಟ್ಟೆ, ವಸತಿ ಕೊಡುವದರಿಂದ ಭಿಕ್ಷಾಟನೆ ನಿಲ್ಲದು, ಬಿಕ್ಷುಕರಿಗೆ ಅವರವರ ಅಭಿರುಚಿಯ ಉದ್ಯೋಗದ ಮೇಲೆ ತರಬೇತಿಯನ್ನು ಕೊಟ್ಟು ಇಲ್ಲಿಂದ ಹೊರಗೆ ಹೋದ ಮೇಲೆ ಅವರು ದುಡಿದು ತಮ್ಮ ಜೀವನವನ್ನು ನಡೆಸಬೇಕು ಅಂದಾಗ ಭಿಕ್ಷಾಟನೆ ನಿಲ್ಲುತ್ತದೆ. ಎಂಬುದು ದಿವಾಕರ್ ರವರ ನಿಲುವು. ಆದರೆ ಇಷ್ಟೊಂದು ವ್ಯವಸ್ಥೆಯನ್ನು ಒದಗಿಸಲು ಈ ಕೇಂದ್ರ ಶಕ್ತಿಯುತವಾಗಿಲ್ಲ ಆದ್ದರಿಂದ ಸರ್ಕಾರ ಈ ನಿರಶ್ರಿತರ ಪರಿಹಾರ ಕೇಂದ್ರಕ್ಕೆ ಹೆಚ್ಚಿನ ಯೋಜನೆಗಳನ್ನು ಜಾರಿಮಾಡುವುದು ಅವಶ್ಯಕ.



ಈ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸುಮಾರು ೧೫೦ ಜನ ಭಿಕ್ಷುಕರಿಗೆ ಆಶ್ರಯ ನೀಡಬಹುದು. ಆದರೆ ಹುಬ್ಬಳ್ಳಿಯೊಂದರಲ್ಲೇ ಅಸಂಖ್ಯಾತ ಭಿಕ್ಷುಕರಿದ್ದಾರೆ ಅವರಿಗೆಲ್ಲ ಈ ಕೇಂದ್ರದಲ್ಲಿ ಆಶ್ರಯ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಈ ನಿರಾಶ್ರಿತರ ಕೇಂದ್ರಗಳಿಗೆ ಹೆಚ್ಚಿನ ಒತ್ತು ಕೊಟ್ಟು ಆರ್ಥಿಕ ಸಹಾಯ ಮಾಡಬೇಕು ಮತ್ತು ಭಿಕ್ಷಾಟನೆ ತೊಲಗಿಸಲು ಯೋಜನೆಗಳನ್ನು ಹಮ್ಮಿಕೊಳ್ಳಬೇಕು.

Friday, May 29, 2009

ಪರಿಸರ ಸ್ನೇಹಿ ಡೆಕಾಥ್ಲಾನ್


‘ಪರಿಸರ ಸ್ನೇಹಿ’ ಪರಿಸರ ಪ್ರತಿಕಾಳಜಿಯುಳ್ಳ ಪ್ರಜ್ಣಾವಂತರೆನಿಸಿಕೊಂಡವರು ಇತ್ತೀಚೆಗೆ ಚರ್ಚಿಸುತ್ತಿರುವ ವಿಷಯವಿದು. ಪರಿಸರಕ್ಕೆ ಪೂರಕವಾಗಿ, ಪರಿಸರ ಹಿತ ಕಾಪಾಡಿಕೊಂಡು ಜೀವನ ನಡೆಸುವುದೇ ಪರಿಸರ ಸ್ನೇಹಿ ಬದುಕು. ಈ ವಿಕಾಸ ಐ.ಬಿ.ಎಂ.ಆರ್ ಗೂ ತಲುಪಿದೆ.

ಇತ್ತೀಚೆಗೆ ವಿದ್ಯಾಭಾರತಿ ಪ್ರತಿಷ್ಟಾನದ ಇನಸ್ಟಿಟ್ಯೂಟ್ ಆಫ್ ಬ್ಯುಜಿನೆಸ್ ಮ್ಯಾನೇಜಮೆಂಟ್ ಅಂಡ ರೀಸರ್ಚ್ ಮೇ೧೨ ಮತ್ತು ಮೇ೧೩ರಂದು ಹುಬ್ಬಳ್ಳಿಯ ಟಿ.ಬಿ ರೇವಣಕರ್ ಕಲ್ಯಾಣಮಂಟಪದಲ್ಲಿ ಅಂತರ್ ಮಹಾವಿದ್ಯಾಲಯಗಳ ರಾಷ್ಟ್ರಮಟ್ಟದ ವ್ಯವಹಾರ ಅದ್ಯಯನ ಮೇಳ ‘ಡೆಕಾಥ್ಲಾನ್ ಮ್ಯಾನೇಜಮೆಂಟ್ ಫೆಸ್ಟ್-೨೦೦೯’ ಆಯೋಜಿಸಿತ್ತು. ಈ ಅದ್ಯಯನ ಮೇಳ ಪರಿಸರ ಸ್ನೇಹಿಯಾಗಿ ಜರುಗಿದ್ದು ವಿಶೇಷ, ಇಲ್ಲಿ ಹೆಚ್ಚು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕೆಂದು ಐ.ಬಿ.ಎಂ.ಆರ್ ನ ವಿದ್ಯಾಧಿಕಾರಿ ಪಿ. ಎನ್. ಕಟಾವಕರ್ ರವರು ನಿರ್ಧರಿಸಿದ್ದರು.

ನಿಟ್ಟಿನಲ್ಲಿ ಪರಿಸರ ಸ್ನೇಹಿಯಾದ ‘ಹ್ಯಾಂಡ್ ಮೇಡ್ ಪೇಪರ್’ ತಯಾರಿಸುವ ತಾರಿಹಾಳದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಕೀರ್ತಿ ಪೇಪರ್ ಕಾರ್ಖಾನೆಯಿಂದ ಡೆಕಾಥ್ಲಾನ್-೨೦೦೯ ಗೆ ಬೇಕಾಗುವ ಕಾಗದದ ಕೈ ಚೀಲ, ಕಡತಗಳು, ಗಿಫ್ಟ್ ಪ್ಯಾಕ್ ಖರೀದಿಸಲಾಗಿತ್ತು. ಇವು ನಿರುಪಯುಕ್ತ ವಸ್ತುಗಳನ್ನು ಪುನರ್ಬಳಕೆ ಮಾಡಿ ತಯಾರಿಸಿದಂತಹವು.

ವಿಜ್ಣಾನ, ಶಿಕ್ಷಣ ಕ್ಷೇತ್ರಗಳು ಬೆಳವಣಿಗೆ ಹೊಂದಿದಂತೆಲ್ಲಾ ಪರಿಸರ ವಿರೋಧಿ ಕಾರ್ಯಗಳು ಮತ್ತು ಪರಿಸರ ವಿರೋಧಿ ವಸ್ತುಗಳ ಬಳಕೆ ಹೆಚ್ಚುತ್ತ ನಡೆದಿವೆ. ಊಟಕ್ಕೆ ಉಪಯೋಗಿಸುವ ಪ್ಲೇಟ್, ಲೋಟಗಳಿಂದ ಹಿಡಿದು ದೇವರಿಗೆ ಅರ್ಪಿಸುವ ಹೂಗಳ ತನಕ ಎಲ್ಲವೂ ಪ್ಲಾಸ್ಟಿಕ್ ಮಯ. ಈ ಪ್ಲಾಸ್ಟಿಕ್ ವಸ್ತುಗಳು ಮಣ್ಣಿನಲ್ಲಿ, ಪರಿಸರದಲ್ಲಿ ಕೊಳೆಯುವ ಗುಣ ಹೊಂದಿಲ್ಲ. ಇದರಿಂದ ಎಷ್ಟೋ ವಿಷ ರಾಸಾಯನಿಕಗಳು ಮಣ್ಣಿಗೆ ಸೇರಿ ಫಲವತ್ತತೆ ಹಾಳುಗೆಡವುತ್ತಿವೆ.

ಪಟ್ಟಣಗಳಿಂದ ಹೊರ ಹೊಮ್ಮುವ ಇಂತಹ ಪರಿಸರ ವಿರೀಧಿ ವಸ್ತುಗಳನ್ನು ಶೇಕರಿಸಲು ನೂರಾರು ಎಕರೆ ಭೂಮಿಯೇ ಬೇಕಾಗುತ್ತದೆ. ಮುಂದೊಂದು ದಿನ ಮನುಷ್ಯನ ವಾಸಸ್ಥಳಕ್ಕಿಂತ ಇಂತಹ ತ್ಯಾಜ್ಯವಸ್ತುಗಳ ಸ್ಥಳವೇ ಹೆಚ್ಚಾಗುತ್ತದೆ. ಆದ್ದರಿಂದ ಆದಷ್ಟು ಪರಿಸರ ಸ್ನೇಹಿಯಾಗಿ ಬದುಕಬೇಕು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು. ಅಂದಾಗ ಪರಿಸರಕ್ಕೆ , ನಮ್ಮ ಜೀವನಕ್ಕೆ ಒಳಿತು ಮತ್ತು ನಮ್ಮ ಮುಂದಿನ ಪೀಳಿಗೆಗೂ ಬದುಕಲು ಯೋಗ್ಯವಾದ ಪರಿಸರವನ್ನು ನಾವು ನೀಡಿದಂತಾಗುತ್ತದೆ.

Tuesday, May 26, 2009

ಸಮ್ಯಕ ದರ್ಶನ


ಭಾಷಣ ಮಾಡುವ ಕಲೆ ಎಲ್ಲರಿಗೂ ಸಿದ್ಧಿಸಿರುವುದಿಲ್ಲ ಕೆಲವರಿಗೆ ಇದು ಹುಟ್ಟಿನಿಂದಲೇ ಬರುತ್ತದೆ. ಇನ್ನು ಕೆಲವರಿಗೆ ಸತತ ಪ್ರಯತ್ನದ ಫಲವಾಗಿ ಒಲಿದಿರುತ್ತದೆ. ಇಂತಹ ಕಲೆಯನ್ನು ತನ್ನ ಸತತ ಪ್ರಯತ್ನದಿಂದ ಮತ್ತು ಶಿಕ್ಷಕರ ನೆರವಿನಿಂದ ಕರಗತ ಮಾಡಿಕೊಂಡ ವಿದ್ಯಾರ್ಥಿ ಎ.ವಿ. ಪ್ರಸಾದ. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ಅವರ ಗುರುಗಳು ಒತ್ತಾಯ ಮಾಡಿ ಭಾಷಣ, ಚರ್ಚಾ ಸ್ಪರ್ಧೆಗಳಿಗೆ ಭಾಗವಹಿಸಲು ಹೆಸರು ಸೇರಿಸುತ್ತಿದ್ದರು, ಅದೇ ಇಂದು ನನಗೆ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆಯಲು ಕಾರಣವಾಗಿದೆ , ಎಂದು ಐ.ಬಿ.ಎಂ.ಆರ್ ಮಹಾವಿದ್ಯಾಲಯದ ಬಿ.ಸಿ.ಎ ವಿದ್ಯಾರ್ಥಿ ಎ.ವಿ.ಪ್ರಸಾದ್ ಹೇಳಿದರು.

ಕಳೆದ ಗುರುವಾರ ಮಾರ್ಚರಂದು ವಿದ್ಯಾಭಾರತಿ ಪ್ರತಿಷ್ಠಾನದ ಇನಸ್ಟಿಟ್ಯುಟ್ ಆಫ್ ಬ್ಯುಸಿನೆಸ್ ಮ್ಯಾನೇಜಮೆಂಟ್ ಆಂಡ ರಿಸರ್ಚ್ (ಐ.ಬಿ.ಎಂ.ಆರ್) ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡ ಎ.ವಿ ಪ್ರಸಾದ ನಮ್ಮ ಜೊತೆ ಅನುಭವವನ್ನು ಹಂಚಿಕೊಂಡದ್ದು ಹೀಗೆ. ನನಗೆ ಚಿಕ್ಕಂದಿನಿಂದ ಭಾಷಣ ಮಾಡುವ ಹವ್ಯಾಸ ಇದೆ, ನಾನು ೫ನೇ ತರಾತಿಯಲ್ಲಿ ಓದುತ್ತಿದ್ದಾಗ ಮೊದಲಬಾರಿಗೆ ಅಂತರ್ ಶಾಲಾ `ಪ್ರತಿಭಾ ಕಾರಂಜಿ'ಯಲ್ಲಿ `ದೂರದರ್ಶನದ ಒಳಿತು ಕೆಡುಕುಗಳು' ಎಂಬ ವಿಷಯದ ಮೇಲೆ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡೆ, ಜಿಲ್ಲಾಮಟ್ಟದಲ್ಲಿ ದ್ವಿತೀಯ ಬಾಹುಮಾನ ಪಡೆದಿದ್ದೇನೆ, ರಾಜ್ಯಮಟ್ಟದಲ್ಲಿ, ತಾಲೂಕ ಮಟ್ಟದಲ್ಲಿ ಭಾಗವಹಿಸಿದ್ದೇನೆ, ಚರ್ಚಾಸ್ಪರ್ಧೆಯಲ್ಲಿ `ಚಾಂಪಿಯನ್ ಶಿಪ್' ಪಡೆದಿದ್ದೇನೆ.

ನನಗೆ ಪುಸ್ತಕ, ಕಾದಂಬರಿ, ಪತ್ರಿಕೆಗಳನ್ನು ಓದುವುದೆಂದರೆ ತುಂಬ ಇಷ್ಟ. ನಾನು ವೇಳೆ ಸಿಕ್ಕಾಗೆಲ್ಲಾ ಗ್ರಂಥಾಲಯದಲ್ಲಿ ಕಳೆಯುತ್ತೇನೆ. ನನಗೆ ದೂರದರ್ಶನದಲ್ಲಿ ವಾರ್ತೆಗಳನ್ನು ಕೇಳುವ ಹವ್ಯಾಸವಿದೆ. ನಾನು ಪದವಿ ಮುಗಿಸಿದ ನಂತರ ಆಯ್.ಎ.ಎಸ್ ಮಾಡಬೇಕೆಂದುಕೊಂಡಿದ್ದೇನೆ. ಚರ್ಚಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಕ್ಕೆ ಏನೆನಿಸುತ್ತದೆ? ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ, `ಪ್ರಯತ್ನಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ', ಹಾಗೆ ನನಗೆ ಬಹುಮಾನ ಬಂದಿದೆ. ಒಂದು ಯಶಸ್ಸಿನ ಹಿಂದೆ ಒಬ್ಬ ಗುರುವಿನ ಮಾರ್ಗದರ್ಶನ ಇರುತ್ತದೆ. ಈ ಚರ್ಚಾಸ್ಪರ್ಧೆಗೆ ಸಂಬಂಧ ಪಟ್ಟ ವಿಷಯವನ್ನು ಸಂಗ್ರಹಿಸಲು ಪ್ರೊ.ಹರ್ಷವರ್ಧನ ಶೀಲವಂತ ಸಹಾಯ ಮಾಡಿದ್ದಾರೆ ಎಂದರು. ಇಷ್ಟೆಲ್ಲಾ ಹವ್ಯಾಸಗಳ ಮಧ್ಯೆಯೂ ಪ್ರಸಾದ ತನ್ನ ವ್ಯಾಸಾಂಗದಲ್ಲಿ ಹಿಂದೆ ಬಿದ್ದಿಲ್ಲ. ಮನಸಿದ್ದರೆ ಮಾರ್ಗ ಎಂಬಂತೆ ಪ್ರತಿ ಕೆಲಸದಲ್ಲಿ ಆಸಕ್ತಿ ಇದ್ದರೆ ಯಶಸ್ಸು ಖಂಡಿತ.

ಡೆಕಾಥ್ಲಾನ್ ಮ್ಯಾನೇಜಮೆಂಟ್ ಫೆಸ್ಟ್-೨೦೦೯


ಆಕಾಶದಲ್ಲಿ ನಕ್ಷತ್ರಗಳ ಹಾಗೆ ಪಳ ಪಳನೆ ಚುರುಕಿನಿಂದ ಹೊಳೆಯುತ್ತ, ಹುಮ್ಮಸ್ಸಿನಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಂಭ್ರಮಿಸಲು ಐಬಿಎಂಆರ್ ಒಂದು ವೇಧಿಕೆಯನ್ನು ಕಲ್ಪಿಸಿಕೊಟ್ಟಿತ್ತು , ಅದೇ ಡೆಕಾಥ್ಲಾನ್ ಮ್ಯಾನೇಜಮೆಂಟ್ ಫೆಸ್ಟ್-೨೦೦೯.



ಮೇ ೧೨, ೨೦೦೯ ಮತ್ತು ಮೇ೧೩ ೨೦೦೯ ರಂದು ರಾಷ್ಟ್ರಮಟ್ಟದ ಅಧ್ಯಯನ ಮೇಳವನ್ನು ಐಬಿಎಂಆರ್ ಹುಬ್ಬಳ್ಳಿಯ ಟಿ.ಬಿ ರೇವಣಕರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿತ್ತು. ಡೆಕಾಥ್ಲಾನ್ ಮ್ಯಾನೇಜಮೆಂಟ್ ಫೆಸ್ಟ್-೨೦೦೯ ಯಶಸ್ವಿಯಾಗಲು ವಿದ್ಯಾರ್ಥಿಗಳ ಪಾತ್ರ ಬಹು ದೊಡ್ಡದು. ನಿರೂಪಣೆಯಿಂದ ಹಿಡಿದು ಪ್ರೆಸ್ ನೋಟ್ಸ್ ಮುಟ್ಟಿಸುವತನಕ ವಿದ್ಯಾರ್ಥಿಗಳದೆ ಕಸರತ್ತು. ನಾನು ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದರಿಂದ ಇದು ನನಗೆ ಒಂದು ಒಳ್ಳೆಯ ಅನುಭವ.



ಅದ್ಯಯನ ಮೇಳ ಎಂಬಿಎ ವಿದ್ಯರ್ಥಿಗಳಿಗೆ ಮೀಸಲಿದ್ದರೂ ಅಲ್ಲಿಯ ಜವಾಬ್ಧಾರಿಯನ್ನು ನಮಗೂ ಅಂದರೆ ಪತ್ರಿಕೋದ್ಯಮದ ವಿದ್ಯರ್ಥಿಗಳಿಗೂ ವಹಿಸಲಾಗಿತ್ತು. ನಮ್ಮ ಗುರುಗಳಾದ ಹರ್ಷವರ್ಧನ ಶೀಲವಂತ ಅವರು ನಮ್ಮನ್ನು ಎರೆಡು ಗುಂಪುಗಳಾಗಿ ವಿಂಗಡಿಸಿ ನಮಗೆ ಎರೆಡು ದಿನದ ವೇಳಾ ಪಟ್ಟಿಯನ್ನು ಹಾಕಿಕೊಟ್ಟಿದ್ದರು. ಈ ಎರೆಡು ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳ ಫೊಟೋ ತೆಗೆಯುವುದು, ವಿಡಿಯೋ ಮಾಡುವುದು ಮತ್ತು ವರಧಿ ಮಾಡಿ ದಿನ ಪತ್ರಿಕೆಗಳಿಗೆ ಕಳಿಸುವ ಜವಾಬ್ಧಾರಿಯನ್ನು ನಮ್ಮ ಮೇಲೆಯೆ ಬಿಟ್ಟಿದ್ದರು.



ಇನ್ನೊಂದು ಮುಕ್ಯವಾದ ವಿಷಯವೆಂದರೆ ನಾವು ನಮ್ಮ ಐಎಂಸಿಆರ್ ಮಹಾವಿದ್ಯಾಲಯದಲ್ಲಿ ಹರ್ಷವರ್ಧನ ಶೀಲವಂತ ಗುರುಗಳ ಮಾರ್ಗದರ್ಶನದಲ್ಲಿ ದೃಷ್ಟಿ ಸೃಷ್ಟಿ ಎಂಬ ಪತ್ರಿಕೆಯನ್ನು ತರುತ್ತಿದ್ದೇವೆ. ಅದರಂತೆ ಈ ಎರೆಡು ದಿನದ ಡೆಕಾಥ್ಲಾನ್ ಅದ್ಯಯನ ಮೇಳದ ಪ್ರಯುಕ್ತ ದಿನಕ್ಕೊಂದರಂತೆ ಅಂದು ನಡೆಯುವ ಕಾರ್ಯಕ್ರಮಗಳ ವರಧಿಯನ್ನು ಆ ದೃಷ್ಟಿ ಸೃಷ್ಟಿ ಪತ್ರಿಕೆಯಲ್ಲಿ ತರಬೇಕಾಗಿತ್ತು. ನಾವೆಲ್ಲ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಪ್ರತಿ ಕೆಲಸವನ್ನು ಹಂಚಿಕೊಂಡಿದ್ದೆವು. ಅದರಂತೆ ನಮ್ಮ ತಂಡದವರು ಫೊಟೋ, ವಿಡಿಯೋ ಮತ್ತು ವರಧಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದೆವು. ವೇಧಿಕೆಯ ಮೇಲೆ ಹೋಗಿ ವಿಡಿಯೋ ಮಾಡುವಾಗಂತು ರೋಮಾಂಚಣವಾದಂತೆ ಅನುಭವ. ಇನ್ನೊಂದು ತಂಡ ಪೇಜ್ ಎಡಿಟಿಂಗ್ ಮಾಡಿದರು, ಅಂತೂ ಮೊದಲ ದಿನದ ಪತ್ರಿಕೆ ಹೊರಗೆ ಬಂತು.



ಮೊದಲ ಪತ್ರಿಕೆಯಲ್ಲಿ ಮೇ ೧೨ ರಂದು ನಡೆದ ಉದ್ಘಾಟನಾ ಸಮಾರಂಭ, ಐಸ್ ಬ್ರೇಕಿಂಗ್, ಬ್ಯುಜಿನೆಸ್ ಕ್ವಿಜ್, ಮಾರ್ಕೆಟಿಂಗ್, ಫೈನಾನ್ಸ್, ಪೇಪರ್ ಪ್ರಸಂಟೇಶನ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವರಧಿ ಮತ್ತು ಫೊಟೋಗಳನ್ನು ಹಾಕಲಾಗಿತ್ತು. ಕುಷಿ ಕುಷಿಯಿಂದ ಮೊದಲ ಪತ್ರಿಕೆಗಳನ್ನು ಡೆಕಾಥ್ಲಾನಗೆ ಆಗಮಿಸಿದ್ದ ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಂಚಿದೆವು ಮತ್ತು ಅವರಿಂದ ಮೆಚ್ಚುಗೆಯ ಮಾತನ್ನು ಗಿಟ್ಟಿಸಿಕೊಂಡೆವು. ಸಂತಸದಲ್ಲೆ ಮರುದಿನ ಪತ್ರಿಕೆಯನ್ನು ಹೊರತರಲು ಸಿದ್ದವಾದೆವು. ಅಷ್ಟರಲ್ಲೆ ಕಂಪ್ಯೂಟರ್ ಸರ್ ದೀಪಕ್ ಅವರು ಮತ್ತೊಂದು ಪತ್ರಿಕೆಯನ್ನು ತರಬೇಕು ಅದು ಡೆಡ್ ಲೈನ್ ಒಳಗಾಗಿ ಎಂದರು. ಈ ಪತ್ರಿಕೆಯನ್ನು ಎರೆಡು ತಂಡಗಳು ಕೂಡಿ ಮಾಡಿದೆವು.



ಮತ್ತೆ ನಮ್ಮ ಮೂರನೇ ಪತ್ರಿಕೆಯನ್ನು ತರಲು ಗುದ್ದಾಡಿದೆವು. ನಮ್ಮ ದುರದೃಷ್ಟವೆಂಬಂತೆ ವಿದ್ಯುತ್ ಕೈಕೊಟ್ಟಿತು. ಆದರು ದೃತಿಗೆಡದೆ ಎಲ್ಲರು ಕೂಡಿ ಕರೆಂಟ್ ಬಂದ ಮೇಲೆ ಕೆಲಸ ಪ್ರಾರಂಭ ಮಾಡಿದೆವಾದರು ಅಂದು ಆ ಪತ್ರಿಕೆ ಬರಲೇಯಿಲ್ಲಾ. ಮನಸ್ಸಿಗೆ ಬಹಳ ನೋವಾದರೂ ಡೆಡ್ ಲೈನ್ ಮಹತ್ವ ಅಂದು ಮನದಟ್ಟಾಯಿತು. ಎಷ್ಟೇ ಕಹಿ ಅನುಭವಗಳಾದರೂ ಡೆಕಾಥ್ಲಾನ್ ನಮ್ಮ ಒಗ್ಗಟ್ಟಿನ ಬಗ್ಗೆ ಮತ್ತು ಆ ಕೆಲಸದ ಬಗ್ಗೆ ತೃಪ್ತಿಯನ್ನು ಕೊಟ್ಟಿತು. ಹರ್ಷ ಸರ್ ಹೊಗಳಿಕೆಯಂತೂ ನಮಗೆ ಬಹಳ ಹರ್ಷ ತಂದಿತು. ಇದರಿಂದ ನಮ್ಮ ಆತ್ಮ ವಿಶ್ವಾಸವೂ ಹೆಚ್ಚಿತು.