ಅಸಂಖ್ಯಾತ ವೀರರ ತ್ಯಾಗದ ಬಲಿದಾನದ ಪ್ರತೀಕವೇ ಇಂದಿನ ಸ್ವತಂತ್ರ್ಯ ಭಾರತ. ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಹಲವಾರು ಭಾರತೀಯರ ರಕ್ತದ ಕಲೆಗಳಿವೆ. ಕ್ರೂರ ಬ್ರಿಟೀಷರ ಕಪಿಮುಷ್ಟಿಯಿಂದ ಭಾರತ ಮಾತೆಯನ್ನು ಸ್ವತಂತ್ರ್ಯಗೊಳಿಸಲು ಸಹಸ್ರಾರು ಜನರು ಪ್ರಾಣ ಬಲಿದಾನ ಮಾಡಿದ್ದಾರೆ. ಅದಕ್ಕೆ ಒಂದು ನಿದರ್ಶನ ಜಲಿಯನ್ ವಾಲಾಬಾಗ್.
ಎಪ್ರೀಲ್ ೧೩, ೧೯೧೯ ಆ ವೈಶಾಖಿನ ಸಮಯ ಕ್ರೂರ ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು ಎರೆಡು ಸಾವಿರ ಮುಗ್ಧ ಹಿಂದು, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಪಾವನವಾದ ಪ್ರದೇಶ ಜಲಿಯನ್ ವಾಲಾಬಾಗ್, ಗಾಂಧೀಜಿ, ಡಾ. ಕಿಚ್ ಲ್ಯೂ ಮತ್ತು ಡಾ.ಸತ್ಯಪಾಲ್ ಅವರನ್ನು ಬ್ರಿಟೀಷ ಸರ್ಕಾರ ಬಂಧನಕ್ಕೊಳಪಡಿಸಿದ್ದರಿಂದ ಆಕ್ರೋಶಗೊಂಡ ಜನ ಪ್ರತಿಕಾರಕ್ಕಾಗಿ ಕಾಯುತ್ತಿದ್ದ ಸಮಯವದು, ಈ ಹಿನ್ನಲೆಯಲ್ಲಿ ಸುಮಾರು ಇಪ್ಪತ್ತು ಸಾವಿರ ಜನರು ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಸಭೆ ಸೇರಿದ್ದರು. ಆ ಸಭೆಯ ಭಾಷಣಕಾರ ಹಂಸರಾಜ್.
ಬ್ರಿಟೀಷರ ವಿರುದ್ಧ ಹೋರಾಡುತ್ತಿರುವ ಭಾರತೀಯರನ್ನು ಬಗ್ಗುಬಡಿಯಬೇಕೆಂದು ಕಾಯುತ್ತಿದ್ದ ಅಂದಿನ ಬ್ರಿಟೀಷ ಸೇನಾಧಿಕಾರಿ ಇ.ಎಚ್.ಡಯರ್ ಗೆ ಜಲಿಯನ್ ವಾಲಾಬಾಗ್ ಒಂದು ವ್ಯವಸ್ಥಿತವಾದ ಸ್ಥಳವಾಗಿತ್ತು. ಈ ಇಕ್ಕಟ್ಟಾದ ಸ್ಥಳದಲ್ಲಿ ಡಯರ್ ತನ್ನ ಸೈನ್ಯದ ತುಕುಡಿಗಳಿಂದ ಆ ಸಭೆಯ ಜನರ ಮೇಲೆ ಒಟ್ಟು ೧,೬೫೦ ಸುತ್ತುಗಳಷ್ಟು ಗುಂಡಿನ ಮಳೆ ಸುರಿಸಿದ, ಕ್ರೂರಿ ಡಯರ್ ಸ್ವಲ್ಪವೂ ಕರುಣೆಯಿಲ್ಲದೆ ಸೇರಿದ ಸುಮಾರು ೨೦ ಸಾವಿರ ಜನರಲ್ಲಿ ೧೫೧೬ ಜನರ ಸಾವಿಗೆ ಕಾರಣನಾದ. ೧೦ ನಿಮಿಷದಲ್ಲಿ ಆ ಸಭೆ ರಕ್ತಮಯವಾಗಿ ರಾಸಿರಾಸಿ ಹೆಣಗಳಿಂದ ಕೂಡಿತು.
೧೯೧೯ರ ಮಾರಣ ಹೋಮದಲ್ಲಿ ವೀರ ಮರಣವನ್ನಪ್ಪಿದವರ ಕುಟುಂಬಗಳು ಅನಾಥವಾದವು. ಗಾಂಧೀಜಿಯವರ ಶಾಂತಿ, ಅಹಿಂಸೆಯ ತತ್ವಕ್ಕೆ ಬದ್ಧರಾಗಿದ್ದ ಜನರು ಹಿಂಸೆಯಿಂದ ಬೆಂದುಹೋದರು. ಈ ಮಾರಣ ಹೋಮದಿಂದ ಇಡೀ ಭಾರತವೇ ರೋಷದಿಂದ ಗುಡುಗಿತು. ಸುಭಾಷ ಚಂದ್ರ ಬೋಸ್, ರವೀಂದನಾಥ ಟಾಗೋರ್ ನಂತ ಕ್ರಾಂತಿವೀರರು ಸಿಡಿದೆದ್ದರು. ಗಾಂಧೀಜಿ ಮತ್ತು ಟಾಗೋರ ರವರು ತಮಗೆ ಬಂದಿದ್ದ ಬಿರುದುಗಳನ್ನು ಬ್ರಿಟೀಷ ಸರ್ಕಾರಕ್ಕೆ ಹಿಂತಿರುಗಿಸಿದ್ದು ಈ ಸಮಯದಲ್ಲೇ. ಅಂದಿನ ಜಲಿಯನ್ ವಾಲಾಬಾಗ್ ಹತ್ಯಾಖಾಂಡ ೧೯೪೭ರ ಸ್ವತಂತ್ರ್ಯ ಸಂಗ್ರಾಮಕ್ಕೆ ಅಡಿಪಾಯವಾಯಿತು.
ಹೀಗೆ ಭಾರತಕ್ಕಾಗಿ ಸಹಸ್ರಾರು ವೀರರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು, ಭಾರತಾಂಬೆಗೆ ಪ್ರಾಣ ತ್ಯಾಗ ಮಾಡಿದ ವೀರರಿಗೆ ಶಾಂತಿ ಕೋರುವುದು ತಮ್ಮ ಕರ್ತವ್ಯ ಮತ್ತು ಈಗಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ.